ಬೆಂಗಳೂರು: ಅಧಿಕಾರಿಗಳು, ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್, ದಾಸರಹಳ್ಳಿ ಮತ್ತು ಹೌಸಿಂಗ್ ಬೋರ್ಡ್ನಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಮಾಗಡಿ ರೋಡ್ ಟೋಲ್ ಗೇಟ್ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಮೇಲೆ ನಂಬಿಕೆ ಇಟ್ಟು ಜನ ಮತ ನೀಡಿರುತ್ತಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ಅವರು ಕಟ್ಟಿರುವ ತೆರಿಗೆ ಹಣ ಸಮರ್ಪಕವಾಗಿ ಉಪಯೋಗಿಸಿ ಮೂಲ ಸೌಕರ್ಯಗಳಾದ ರಸ್ತೆ, ಆರೋಗ್ಯ, ನೀರು, ಬೀದಿದೀಪಗಳ ನಿರ್ಮಾಣ ಮಾಡುತ್ತೇವೆ. ಈಗಾಗಲೇ ಮಾಗಡಿ ರೋಡ್ನ ಟೋಲ್ ಗೇಟ್ನಿಂದ ಸುಮ್ಮನಹಳ್ಳಿ ಜಂಕ್ಷನ್ವರಗೆ (ಚರ್ಚ್ ಸ್ಟ್ರೀಟ್) ಮಾದರಿ ಹೈಟೆಕ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ
ದಾಸರಹಳ್ಳಿಯಲ್ಲಿ 200 ಹಾಸಿಗೆಯ ಸಾಮರ್ಥ್ಯವುಳ್ಳ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಇದನ್ನೂ ಓದಿ: 4 ಬಾರಿ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರೂಪಲಿಂಗೇಶ್ವರ್, ಜಯರತ್ನ, ಮತ್ತು ಬಿಜೆಪಿ ಮುಖಂಡರಾದ ಹೆಚ್.ರಮೇಶ್, ಡೊಡ್ಡವೀರಯ್ಯ, ಶ್ರೀಧರ್ ಮತ್ತು ವಿಶೇಷ ಆಯುಕ್ತರಾದ ದೀಪಕ್, ಮುಖ್ಯ ಅಭಿಯಂತರಾದ ಪ್ರಹ್ಲಾದ್ ಪಾಲ್ಗೊಂಡಿದ್ದರು.