ಮೈಸೂರು: ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಅಂಬಾರಿ ಒಳಗೆ ಕೂರಿಸುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಸೀರೆ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ಮುಂದೆ ಪ್ರತಿ ದಸರಾದಲ್ಲೂ ಉತ್ಸವ ಮೂರ್ತಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಮೈಸೂರು ಸಿಲ್ಕ್ ಸೀರೆಯನ್ನೇ ಉಡಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸೀರೆ ಉಡಿಸುವ ಬಗ್ಗೆಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಈ ಹಿಂದೆ ಸೀರೆ ಉಡಿಸುವ ವಿಚಾರಕ್ಕೆ ಜಟಾಪಟಿಯಾಗುತಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಟಾಪಟಿ ಉಂಟಾಗಿ ಅವತ್ತು ಮೈಸೂರು ಮೇಯರ್ ಆಗಿದ್ದ ಎಂ.ಜೆ ರವಿಕುಮಾರ್ ಹಾಗೂ ಸಿದ್ದರಾಮಯ್ಯ ಮನೆಯವರ ನಡುವೆ ಜಟಾಪಟಿ ಉಂಟಾಗಿತ್ತು.
ಚಾಮುಂಡೇಶ್ವರಿ ವಿಗ್ರಹಕ್ಕೆ ಸೀರೆ ಉಡಿಸಲು ಪೈಪೋಟಿ ಉಂಟಾಗಿ ಕೊನೆಗೆ ವಿಗ್ರಹಕ್ಕೆ ಎರಡು ಸೀರೆಗಳನ್ನು ಉಡಿಸಲಾಗಿತ್ತು. ಇದೀಗ ಇವೆಲ್ಲಕ್ಕೂ ಬ್ರೇಕ್ ಹಾಕಿರುವ ಸಚಿವ ವಿ.ಸೋಮಣ್ಣ, ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಪರಂಪರೆ ಮುಂದುವರಿಸಲು ನಿರ್ಧಾರ ಮಾಡಲಾಗಿದೆ.