ಬೆಳಗಾವಿ: ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿರುವ ಸಚಿವ ಉಮೇಶ್ ಕತ್ತಿ ಅವರು, ಕೊಟ್ಟಿರುವ ಜವಾಬ್ದಾರಿಯನ್ನು ಸಂತೋಷದಿಂದ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಉಸ್ತುವಾರಿ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ವಿಜಯಪುರದ ಉಸ್ತುವಾರಿ ವಹಿಸಿರುವುದು ತೃಪ್ತಿ ತಂದಿದೆ. ಜಿಲ್ಲೆಗೆ ಹೋಗಿ ಕೊಟ್ಟಿರುವ ಉಸ್ತುವಾರಿ ಸಚಿವ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ
ಸಂಪುಟ ಪುನಾರಚನೆ ಕುರಿತು ಮಾತನಾಡಿದ ಅವರು, ಸಂಪುಟ ಪುನಾರಚನೆ ಮಾಧ್ಯಮಗಳ ಸೃಷ್ಟಿ. ಪಂಚರಾಜ್ಯ ಚುನಾವಣೆ ಮುಗಿದ ಮೇಲೆ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹಿರಿಯ ಸಚಿವರಿಗೆ ಕೊಕ್ ಕೊಡುವುದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಸಿಎಂ ಬೊಮ್ಮಾಯಿ ಅವರು ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ. ದೇವರು ಅವರಿಗೆ ಒಳ್ಳೆಯ ಆರೋಗ್ಯ ನೀಡಲಿ ಹಾರೈಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!
ಜಾರಕಿಹೊಳಿ ಸಹೋದರರ ಬಿಟ್ಟು ಸಭೆ ನಡೆಸಿದ ಬಗ್ಗೆ ಪ್ರಕ್ರಿಯಿಸಿ, ಪರಿಷತ್ ಸೋಲಿನ ಪರಾಮರ್ಶೆ ಕುರಿತು ಸಭೆ ಕರೆಯಲಾಗಿತ್ತು. ಅವರು ಯಾಕೆ ಬಂದಿಲ್ಲ ಎಂದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ತಿಳಿಸಿದ್ದಾರೆ.