ಉಡುಪಿ: ನಮ್ಮ ಗ್ರಾಮಕ್ಕೆ ಘನತ್ಯಾಜ್ಯ ನಿರ್ವಹಣಾ ಘಟಕ ಬೇಡ. ಬೇರೆ ಎಲ್ಲಾದರು ಘಟಕ ಮಾಡಿಕೊಳ್ಳಿ ಅಂತ ಕಾರ್ಕಳದ ಗ್ರಾಮಸ್ಥರು ಯೋಜನೆ ದೂರ ತಳ್ಳುತ್ತಾ ಬಂದಿದ್ದರು. ಇದನ್ನು ಗಮನಿಸಿದ ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಘಟಕ ನನ್ನ ಮನೆ ಬಳಿಯೇ ಇರಲಿ ಅಂತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಈ ಮೂಲಕ ಪ್ರಧಾನಿ ಮೋದಿಯ ಸ್ವಚ್ಛ ಭಾರತ್ ಯೋಜನೆಗೆ ಬೆಂಬಲ ನೀಡಿ ಮಾದರಿಯಾಗಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ದೇಶದ ಮೊಟ್ಟ ಮೊದಲ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟನೆಯಾಗಿದೆ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕ ನಿರ್ಮಾಣವಾಗಿದ್ದು, ಕಸ ಸಂಸ್ಕರಣೆ ಕೆಲಸ ಶುರುವಾಗಿದೆ. ದೇಶದಲ್ಲೇ ಗ್ರಾಮೀಣ ಭಾಗದ, ಮೊದಲ ಘಟಕ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಸಚಿವ ಸುನೀಲ್ ಕುಮಾರ್, ರಾಮಕೃಷ್ಣ ಮಿಷನ್ನ ಏಕಗಮ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ
ಕಾರ್ಕಳ ತಾಲೂಕಿನ ಹಲವು ಗ್ರಾಮಗಳ ಘನತ್ಯಾಜ್ಯ ಇಲ್ಲಿ ಸಂಸ್ಕರಣೆ ಆಗಲಿದೆ. ಕಸ ಸಂಗ್ರಹಿಸಿ ಈ ಘಟಕಕ್ಕೆ ತರಲಾಗುತ್ತದೆ. ಬೇರೆ ಬೇರೆ ವಿಭಾಗಗಳಾಗಿ ಬೇರ್ಪಡಿಸಿ, ಶುಚಿ ಮಾಡಿ, ಮಷೀನ್ ಮೂಲಕ ಪ್ರೆಸ್ ಮಾಡಿ ಕಡಿಮೆ ಜಾಗದಲ್ಲಿ ಸಂಗ್ರಹಿಸಿಡಲಾಗುತ್ತದೆ. ಸಂಗ್ರಹವಾದ ಕಸಗಳನ್ನು ಶುದ್ಧೀಕರಿಸಿ ಮರುಬಳಕೆಯ ಘಟಕಕ್ಕೆ ರವಾನಿಸಲಾಗುತ್ತದೆ. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಇತಿಹಾಸ ಅರ್ಥ ಮಾಡಿಕೊಳ್ಳಬೇಕು: ಡಾ.ಕೆ. ಸುಧಾಕರ್
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಇಂಧನ ಸಚಿವ ಸುನಿಲ್ ಕುಮಾರ್ ತನ್ನ ಮನೆಯ ಆಸುಪಾಸಿನಲ್ಲೇ ಘಟಕವನ್ನು ತೆರೆಯಲು ಸೂಚಿಸಿರುವುದು ಉತ್ತಮ ನಡೆ. ನಿಟ್ಟೆಯಲ್ಲಿರುವ ಘಟಕ ದೇಶಕ್ಕೆ ಮಾದರಿಯಾಗಿದೆ. ನಮಗಿರೋದು ಒಂದೇ ಭೂಮಿ, ಅದನ್ನು ಬಹಳ ಪರಿಶುದ್ಧವಾಗಿ ಕಾಪಾಡಬೇಕು. ಗ್ರಾಮೀಣ ಭಾಗದಲ್ಲಿ ಕಸ ವಿಲೇವಾರಿ ಘಟಕ ಇರದ ಕಾರಣ ತ್ಯಾಜ್ಯ ಜಾಸ್ತಿ ಸಂಗ್ರಹವಾಗುತ್ತದೆ. ಕೇಂದ್ರ ಸರಕಾರದ ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಇಂತಯ ಯೋಜನೆ ಎಲ್ಲಾ ರಾಜ್ಯದಲ್ಲೂ ವಿಸ್ತರಿಸುವ ಅವಶ್ಯಕತೆಯಿದೆ ಎಂದರು.
ಸಚಿವ ಈಶ್ವರಪ್ಪ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳ ಸಿಇಓಗಳನ್ನು ನಿಟ್ಟೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕರೆದುಕೊಂಡು ಬರುತ್ತೇನೆ. ಪ್ರತಿ ಜಿಲ್ಲೆಯಲ್ಲೂ ಇಂತಹ ಘಟಕಗಳು ತೆರೆಯುವ ಅಗತ್ಯತೆಯಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗುವ ಸಂದರ್ಭ ಈ ಪ್ರಸ್ತಾವನೆಯನ್ನು ಇಡುತ್ತೇನೆ ಎಂದರು. ಘಟಕದಲ್ಲಿ ವಿಲೇವಾರಿ ಪ್ರಕ್ರಿಯೆ ಬಹಳ ವೈಜ್ಞಾನಿಕವಾಗಿ ನಡೆಯುತ್ತಿದ್ದು ಯಾವುದೇ ದುರ್ವಾಸನೆ ಇಲ್ಲ ಇದನ್ನ ಹೀಗೆ ಮುಂದುವರಿಸಿ ಎಂದು ಸಲಹೆ ನೀಡಿದರು.