ಬೆಂಗಳೂರು: ಹಿಜಬ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಂತೆ ಸಮವಸ್ತ್ರ ವಿವಾದವನ್ನು ತಾಲಿಬಾನ್ ಹಂತಕ್ಕೆ ಹೋಲಿಸಿ ಬಿಜೆಪಿಯೂ ರಾಡಿ ಎಬ್ಬಿಸಿದೆ. ಯಾವುದೇ ಕಾರಣಕ್ಕೂ ಮಂಗಳೂರು, ಉಡುಪಿಯನ್ನು ಮತ್ತೊಂದು ತಾಲಿಬಾನ್ ಆಗಲು ಬಿಡಲ್ಲ ಎಂದು ಸಚಿವ ಸುನೀಲ್ ಕುಮಾರ್ ಗುಡುಗಿದ್ದಾರೆ.
ಧರ್ಮದ ಕಾರಣಕ್ಕೆ, ಮತೀಯವಾದದ ಕಾರಣಕ್ಕೆ ಹೀಗೆ ಇಷ್ಟ ಬಂದ ವಸ್ತ್ರ ಹಾಕಿಕೊಂಡು ಬರುವುದನ್ನ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಗೆ ಶುಲ್ಕ ಕಟ್ಟೋಕೆ ಕಷ್ಟ ಅನ್ನೋ ಒಂದು ವಲಯದವರು ಕೋರ್ಟ್ಗೆ ಹೋಗ್ತಾರೆ ಅಂದ್ರೆ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ, ಖಾದರ್, ಜಮೀರ್ ಮಾತನ್ನು ಕೇಳ್ತಿದ್ರೆ ಇದರ ಹಿಂದೆ ಅವರೇ ಇದ್ದಂತಿದೆ ಎಂದು ಸುನೀಲ್ ಕುಮಾರ್ ಆಪಾದಿಸಿದ್ದಾರೆ.
ಸಿದ್ದರಾಮಯ್ಯನವ್ರೇ ಶಾಸಕ ರಘುಪತಿ ಭಟ್ ಯಾವೋನೋ ಅಲ್ಲ. ಅವರು ಎಸ್ಡಿಎಂಸಿ ಅಧ್ಯಕ್ಷರು. ಅವರಿಗೆ ಹೇಳೋಕೆ ಅಧಿಕಾರ ಇದೆ ಸಚಿವ ಬಿಸಿ ನಾಗೇಶ್ ತಿರುಗೇಟು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡ್ತಿದ್ದಾರೆ. ಮೋದಿ ಜನಪ್ರಿಯತೆ ತಡೆಯಲು ಇಂತಹ ಕೃತ್ಯ ಮಾಡ್ತಿದ್ದಾರೆ ಎಂದು ಬಿಸಿ ನಾಗೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪರ ಸಿದ್ದರಾಮಯ್ಯ ಬಣದ ಬ್ಯಾಟಿಂಗ್ – ಹೆಣ್ಮಕ್ಕಳ ವಿದ್ಯಾಭ್ಯಾಸ ತಡೆಗೆ ಹುನ್ನಾರದ ಆರೋಪ
ಇತ್ತ ಸಿಟಿ ರವಿ ಟ್ವೀಟ್ ಮಾಡಿ, ಇಂದು ಅವರು ಹಿಜಬ್ ಧರಿಸಿ ಶಾಲೆಗೆ ಹೋಗಲು ಅನುಮತಿ ಕೇಳೋರು ನಾಳೆ ಷರಿಯಾ ಕಾನೂನಿಗೂ ಒತ್ತಾಯ ಮಾಡ್ತಾರೆ. ನೀವು ಶಾಲೆಯ ನಿಯಮ ಅನುಸರಿಸಿ, ಇಲ್ಲ ಅಂದ್ರೆ ಶಾಲೆಗೆ ಹೋಗೋದನ್ನೇ ನಿಲ್ಲಿಸಿ ಎಂದು ಹೇಳಿದ್ದಾರೆ. ಸಚಿವ ಈಶ್ವರಪ್ಪ ಅಂತೂ, ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ಉಸಿರು ಗಟ್ಟಿ ಸತ್ತೇ ಹೋಗುತ್ತೆ ಎಂದು ಲೇವಡಿ ಮಾಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮಾತ್ರ, ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ. ಈ ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿಯರ ಹೋರಾಟದ ಹಿಂದೆ ಎಸ್ಡಿಪಿಐ, ಪಿಎಫ್ಐ, ಎಂಐಎಂ ಸಂಘಟನೆಗಳಿವೆ. ಶಿಕ್ಷಣದಲ್ಲಿ ಇಸ್ಲಾಮೀಕರಣ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.