ಬೆಂಗಳೂರು: ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಶಿಕಲಾ ಜೊಲ್ಲೆಯವರು ಸಚಿವೆಯಾಗಿದ್ದರೂ ಅವರ ಅರಿವಿಗೆ ಬಾರದೇ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಾ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಗಮನಕ್ಕೆ ತರದೇ ಸಿಬ್ಬಂದಿಗೆ ಪದನ್ನೋತಿ ಆದೇಶ ನೀಡಿರುವ ಇಲಾಖೆಯ ನಿರ್ದೇಶಕರ ನಡೆಗೆ ಸಚಿವ ಶಶಿಕಲಾ ಜೊಲ್ಲೆ ಗರಂ ಆಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರ ಗಮನಕ್ಕೆ ತರದೇ ಕೆಲವರನ್ನು ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ನೀಡಿ, ಸ್ಥಳ ನಿಯುಕ್ತಿ ಮಾಡಿ ಆದೇಶ ನೀಡಲಾಗಿದೆ. ಇಲಾಖೆ ನಿರ್ದೇಶಕರಾದ ಕೆ.ಎ.ದಯಾನಂದ್ ಈ ಆದೇಶ ಹೊರಡಿಸುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರ ಸಿಟ್ಟಿಗೆ ಗುರಿಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಈ ಕುರಿತು ಸಚಿವೆ ಶಶಿಕಲಾ ಜೊಲ್ಲೆಯವರು ಇಂದು ಪತ್ರ ಬರೆದು ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ಕೂಡಲೇ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ಕೊಟ್ಟು ನಿರ್ದೇಶಕರು ಹೊರಡಿಸಿರುವ ಆದೇಶಕ್ಕೆ ತಡೆ ಕೊಡಬೇಕು. ಅಲ್ಲದೇ ಆದೇಶಕ್ಕೆ ತಡೆ ಕೊಟ್ಟು ಕಡತವನ್ನು ತಮ್ಮ ಅನುಮೋದನೆಗೆ ಕಳಿಸಿಕೊಡಬೇಕೆಂದು ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದ್ದಾರೆ.
ಇನ್ಮುಂದೆ ಇಲಾಖೆಯ ಯಾವುದೇ ಅಧಿಕಾರಿ/ಸಿಬ್ಬಂದಿ ವರ್ಗಾವಣೆ/ಸ್ಥಳ ನಿಯುಕ್ತಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ತಮ್ಮ ಅನುಮೋದನೆ ಪಡೆದೇ ಮುಂದಿನ ಕ್ರಮ ಕೈಗೊಳ್ಳಬೇಕೆಂದೂ ಸಚಿವೆ ಶಶಿಕಲಾ ಜೊಲ್ಲೆ ಇಲಾಖೆ ನಿರ್ದೇಶಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆಯೇ ಈ ರೀತಿಯ ಸೂಚನೆ ಕೊಟ್ಟಿದ್ದರೂ ಇಲಾಖೆ ನಿರ್ದೇಶಕರು ಸಚಿವರ ನಿರ್ದೇಶನ ಉಲ್ಲಂಘಿಸಿ ಕೆಲವರಿಗೆ ಪದೋನ್ನತಿ ಕೊಟ್ಟಿರುವುದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಪತ್ರದಲ್ಲಿ ಇಲಾಖೆ ನಿರ್ದೇಶಕರ ವಿರುದ್ಧ ಕಿಡಿ ಕಾರಿದ್ದಾರೆ.