– ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಸರ್ಕಾರ
ತುಮಕೂರು: ಸಿದ್ದಗಂಗಾ ಮಠ ಸೇರಿದಂತೆ ಕೆಲ ಮಠ ಮಾನ್ಯಗಳಿಗೆ ದಾಸೋಹ ಯೋಜನೆಯಡಿ ವಿತರಿಸಲಾಗುತ್ತಿದ್ದ ಅಕ್ಕಿಯನ್ನ ಕಡಿತಗೊಳಿಸಿ ಮುಜುಗರಕ್ಕೀಡಾಗಿದ್ದ ರಾಜ್ಯ ಸರ್ಕಾರ, ಈಗ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ.
ಸಿಎಂ ಸೂಚನೆ ಮೇರೆಗೆ ಬುಧವಾರ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕೇಂದ್ರದಿಂದ ನೀಡುವ ಅಕ್ಕಿ ಗೋಧಿ ಕಡಿತಗೊಂಡಿರುವ ಬಗ್ಗೆ ಶ್ರೀಗಳು ಪತ್ರ ಬರೆದಿದ್ದರು. ಈ ವಿಚಾರವಾಗಿ ಮಂಗಳವಾರ ಸಿಎಂ ತಕ್ಷಣದಿಂದಲೇ ಉಚಿತವಾಗಿ ಅಕ್ಕಿ, ಗೋಧಿ ನೀಡಲು ನಿರ್ಧರಿಸಿದ್ದು ಅಗತ್ಯ ಅಕ್ಕಿ ಹಾಗೂ ಗೋಧಿಯನ್ನ ಮಠಕ್ಕೆ ಸರಬರಾಜು ಮಾಡ್ತೀವಿ ಎಂದು ಸಮರ್ಥಿಸಿಕೊಂಡಿದ್ದಾರೆ.
ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾದ ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋಧಿ ಕಡಿತಗೊಂಡ ಹಿನ್ನೆಲೆಯಲ್ಲಿ ಸಾಕಷ್ಟು ಮುಜುಗರಕ್ಕೊಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಉಚಿತವಾಗಿ ಅಕ್ಕಿ ಗೋಧಿ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ, ಸಿದ್ದಲಿಂಗ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ರು. ಶ್ರೀ ಮಠಕ್ಕೆ ಬೇಕಾಗಿರುವ 755 ಕ್ವಿಂಟಾಲ್ ಅಕ್ಕಿ, 350 ಕ್ವಿಂಟಾಲ್ ಗೋಧಿಯನ್ನ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು ಎಂದರು. ಇದನ್ನೂ ಓದಿ: ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ
ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಶಶಿಕಲಾ ಜೊಲ್ಲೆ, ಸಿಎಂ ಗರಂ ಆಗಿಲ್ಲ, ಏನೂ ಆಗಿಲ್ಲ. ಶ್ರೀಗಳು ಒಂದು ಪತ್ರ ಬರೆದಿದ್ದರು. ಫೈಲ್ ತರಿಸಿಕೊಂಡಿದ್ದೇನೆ. ಪತ್ರ ನಾನು ನೋಡಿ ಪ್ರಕ್ರಿಯೆ ಆರಂಭಿಸಿದ್ದೆ, ಅಷ್ಟರಲ್ಲೇ ನಿನ್ನೆ ಸಚಿವ ಸಂಪುಟದಲ್ಲಿ ಸಿಎಂ ಅನುಮತಿ ಕೊಟ್ಟರು. ಕೇಂದ್ರದಿಂದ ಸ್ಥಗಿತಗೊಂಡರೂ ರಾಜ್ಯದಿಂದ ಅಕ್ಕಿ ಸಿಗಲಿದೆ ಎಂಬ ವಿಶ್ವಾಸ ಶ್ರೀಗಳು ಇಟ್ಟುಕೊಂಡಿದ್ದರು. ಅದನ್ನ ಶ್ರೀಗಳು ನನ್ನ ಬಳಿ ಹೇಳಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ನಾನು ಏಕೈಕ ಮಹಿಳಾ ಸಚಿವೆ, ಸಾಮಾನ್ಯ ಕಾರ್ಯಕರ್ತಳಾಗಿ ದುಡಿದಿದ್ದೆನೆ. ಹಾಗಾಗಿ ಸಚಿವ ಸಂಪುಟದಿಂದ ನನ್ನನ್ನು ಕೈ ಬಿಡಲ್ಲ, ನಾನು ಮುಂದುವರಿಯುತ್ತೆನೆ ಎಂಬ ವಿಶ್ವಾಸ ಇದೆ ಹೇಳಿದರು.