ಬೆಂಗಳೂರು: ಆಗ ಕಾಂಗ್ರೆಸ್ನವರು ನಾವೆಲ್ಲ ಒಂದು ಎಂದಿದ್ದರು. ಆದರೆ ಈಗ ಕಾಂಗ್ರೆಸ್ ಬೀದಿ ನಾಟಕ ಹೊರಗೆ ಬಂದಿದೆ ಎಂದು ಆರ್. ಅಶೋಕ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕಾಂಗ್ರೆಸ್ನ ಬೀದಿ ಜಗಳ ಬಯಲಾಗಿದೆ. ಸಿದ್ದರಾಮಯ್ಯ, ಅಶೋಕ್ ಪಟ್ಟಣ ಅವರ ಪಿಸುಮಾತುಗಳು ಮಾಧ್ಯಮದಲ್ಲಿ ಬಂದಿದೆ. ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಬೀದಿ ಜಗಳವಾಗಿ ಹೊರಗೆ ಬಂದಿದೆ. ಸಿದ್ದರಾಮಯ್ಯಗಿಂತ ಮೇಲೆ ಇದ್ದೀವಿ ಎಂದು ತೋರಿಸಲು ಡಿಕೆಶಿ ಪಾದಯಾತ್ರೆ ಅಂತಾ ನಾವು ಹೇಳಿದ್ವಿ. ಆದರೆ ಆಗ ಅವರೆಲ್ಲಾ ನಾವೆಲ್ಲಾ ಎಂದೆ ಎಂದಿದ್ದರು. ಈಗ ಕಾಂಗ್ರೆಸ್ ಬೀದಿ ನಾಟಕ ಹೊರಗೆ ಬರುವುದರ ಜೊತೆಗೆ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡಿಕೆಶಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳು ಮಾಡುತ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ. ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸು ಕಾಣುವ ಅವರು ಈ ಒಳಜಗಳದಿಂದ ಆಚೆ ಬಂದರೆ ಸಾಕು ಎಂದ ಅವರು ಕಾಂಗ್ರೆಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಜಗಳ ಆಡುತ್ತೇನೆ ಇರಬೇಕು ಎಂದು ಕಾಲೇಳೆದರು.
ಇದೇ ವೇಳೆ ಶಾಸಕ ರಾಮದಾಸ್, ನಾಗೇಂದ್ರ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ಮಾತಿನ ಸಮರ ವಿಚಾರವಾಗಿ ಮಾತನಾಡಿದ ಅವರು, ಅದು ಅಭಿವೃದ್ಧಿಯ ಜಗಳವೇ, ಹೊರತು ಪಕ್ಷದ ಜಗಳವಲ್ಲ. ಅಭಿವೃದ್ಧಿ ವಿಚಾರಕ್ಕಾಗಿ ಜಗಳ ಆಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು
ವೆಹಿಕಲ್ ಟೋಯಿಂಗ್ ವಿಚಾರದಲ್ಲಿ ಪೊಲೀಸರು, ಜನಸಾಮಾನ್ಯರ ನಡುವೆ ಘರ್ಷಣೆ ವಿಚಾರವಾಗಿ ಮಾತನಾಡಿದ ಅವರು, ಕೆಲವೆಡೆ ಬೇಕಾಬಿಟ್ಟಿ ಟೋಯಿಂಗ್ ಮಾಡುತ್ತಿದ್ದಾರೆ. ಈಗಾಗಲೇ ರವಿಕಾಂತೇಗೌಡ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಈ ಕುರಿತು ಸೋಮವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಬೆಂಗಳೂರಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ ಎಂದ ಅವರು, ಪೊಲೀಸರು, ಜನಸಾಮಾನ್ಯರ ನಡುವೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ