ಬೆಂಗಳೂರು: ಆರ್ ಎಸ್ಎಸ್ (RSS) ವಿರುದ್ಧ ಟೀಕೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಆರ್ ಅಶೋಕ್, ನಮಗೆಲ್ಲರಿಗು ಆರ್ಎಸ್ಎಸ್ ತಾಯಿ ಸಮಾನ. ತಾಯಿಯ ಬಗ್ಗೆ ಮಾತನಾಡಿದರೆ ನಾವು ಪ್ರತಿಕ್ರಿಯೆ ನೀಡಲೇಬೇಕು. ನಮಗೆಲ್ಲಾ ಒಂದೇ ಪಕ್ಷ, ಆದರೆ ಇವರಿಗೆ ಹಾಗಲ್ಲ. ಮೊದಲು ಜೆಡಿಎಸ್, ಈಗ ಕಾಂಗ್ರೆಸ್ ಎಂದು ಎರಡು ಮೂರು ಪಕ್ಷ ಆಗಿದೆ, ಆರ್ ಎಸ್ಎಸ್ ಯಾವತ್ತೂ ಸಿದ್ದರಾಮಯ್ಯ ಬಗ್ಗೆ ಮಾತಾಡಿಲ್ಲ. ಆದರೆ ಇವರು ಯಾಕೆ ಆರ್ಎಸ್ಎಸ್ ಬಗ್ಗೆ ಮಾತಾನಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಹಣ ಕೇಳಿದ್ರು: ರೇಣುಕಾಚಾರ್ಯ ಬಾಂಬ್
ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮಾಡಲು ಕೆಲಸ ಇಲ್ಲದವರು ಏನೋ ಮಾಡಿದ್ರಂತೆ ಅನ್ನುವ ರೀತಿ ಆಗಿದೆ ಸಿದ್ದರಾಮಯ್ಯ ವರ್ತನೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ದು ಒಡೆದು ಆಳುವ ಸಂಸ್ಕೃತಿ. ಲಿಂಗಾಯತರನ್ನು ಒಡೆಯಲು ಹೋಗಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಈಗ ಆರ್ಯರು, ದ್ರಾವಿಡರು ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲ ಯಾರು ಅನ್ನುವದನ್ನೂ ಹೇಳಬೇಕಾಗುತ್ತದೆ. ಪ್ರತಿದಿನ ಡಿ.ಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ತಾನು ಪಕ್ಷದಲ್ಲಿಯೇ ಕಾಣೆಯಾಗುತಿದ್ದೇನೆ ಎಂಬ ಅಭದ್ರತೆ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಭೆ ಚುನಾವಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಬೆಂಬಲ ನೀಡುವುದಿಲ್ಲ. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.