ಮಂಡ್ಯ: ದಿವಂಗತ ಅಂಬರೀಶ್ ಹೆಸರು ಹೇಳಲ್ಲ ಹೇಳಲ್ಲ ಎನ್ನುತ್ತಲೇ ಅಂಬಿ ಹೆಸರು ಜಪವಾಗುತ್ತಿದ್ದು, ಇದೀಗ ಸಚಿವ ಪುಟ್ಟರಾಜು ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸವಾಲೆಸೆದಿದ್ದಾರೆ.
ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಸುಮಲತಾ ಹೇಳಿಕೊಳ್ಳಲಿ. ಅಂಬರೀಶ್ ಸಮಾಧಿ ಬಳಿ ಪೂಜೆ ಮಾಡಲು ಹೋದಾಗ ಪುಟ್ಟರಾಜು ಅವರು ರಾಜಕೀಯವಾಗಿ ಕುಟುಂಬಕ್ಕೆ ಏನೇನು ಸಹಾಯ ಮಾಡಿದ್ದಾರೆ ಎಂಬುದನ್ನು ಅಂಬರೀಶ್ ಅಣ್ಣನ ಮುಂದೆ ಕೇಳಿಕೊಳ್ಳಲಿ ಎಂದು ಸಚಿವರು ಸುಮಲತಾಗೆ ಚಾಲೆಂಜ್ ಮಾಡಿದ್ದಾರೆ.
ನಾನು ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇನೆ. ಹಾಗೆಯೇ ರಾಮನಗರದಲ್ಲಿ ಸೋತ ಬಳಿಕ ಅವರನ್ನು ನಾನೇ ಮಂಡ್ಯಕ್ಕೆ ಕರೆತಂದಿದ್ದೇನೆ. ಅಲ್ಲದೇ ಮುಂದೆ ನೀವು ಇಲ್ಲೇ ಎಂಪಿ ಅಭ್ಯರ್ಥಿ ಆಗಬೇಕು ಎಂದು ಮಾಡಿದ್ದೀನಿ. ರಾಜಕೀಯ ಪ್ರವೇಶ ಮಂಡ್ಯದಿಂದಲೇ ಮಾಡಬೇಕು ಎಂದು ಹೇಳಿದ್ದೆ ಅಂದ್ರು.
ಅಂಬರೀಶ್ ಅವರ ರಾಜಕೀಯ ಏಳಿಗೆಗಾಗಿ ನಾನು ಶ್ರಮವಹಿಸಿದ್ದೇನೆ. ನನ್ನ ಆತ್ಮಾಭಿಮಾನದ ಬಗ್ಗೆ ಸುಮಲತಾ ಪ್ರಶ್ನೆ ಮಾಡೋದು ಬೇಡ ಎಂದು ಪುಟ್ಟರಾಜು, ಸುಮಲತಾ ವಿರುದ್ಧ ಗರಂ ಆಗಿದ್ದಾರೆ.
ಈ ಹಿಂದೆ ಸುಮಲತಾ ಅವರು ಕೂಡ ಅಂಬರೀಶ್ ಹೆಸರನ್ನು ಬಿಟ್ಟು ಪ್ರಚಾರ ಮಾಡಲಿ. ಸುಮಲತಾ ಅಂಬರೀಶ್ ನಲ್ಲಿ ಅಂಬರೀಶ್ ಹೆಸರನ್ನು ಬೇರ್ಪಡಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದರು.