ಬೆಂಗಳೂರು: ಪ್ರತಿ ತಿಂಗಳ ಎರಡನೇ ಮಂಗಳವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದು ತೋಟಗಾರಿಕಾ, ಸಚಿವ ಮುನಿರತ್ನ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಪಕ್ಷದ ಕಚೇರಿಗೆ ನಾಯಕರ ಸೂಚನೆ ಮೇರೆಗೆ ಭೇಟಿ ನೀಡಿದ್ದೇನೆ. ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದ ಹಾಗೂ ಕಾರ್ಯಕರ್ತರ ಸಮಸ್ಯೆಗಳ ಪರಿಹಾರ ಕುರಿತು ವಿಚಾರ ಚರ್ಚೆ ಮಾಡಲಾಯಿತು ಎಂದರು.ಇದನ್ನೂ ಓದಿ: ಲಾಲ್ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ
ಪ್ರತಿ ತಿಂಗಳ ಎರಡನೇ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಸ್ಯೆ ಆಲಿಸಲು ಪಕ್ಷದ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡುತ್ತೇನೆ. ಅಲ್ಲದೇ ಆಗಸ್ಟ್ 26ರಂದು ಕೋಲಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೋಲಾರದಲ್ಲಿಯೂ ಸಹ ಪಕ್ಷದ ಕಾರ್ಯಕರ್ತರು ಇಲಾಖೆ ಸಂಬಂಧ ಸಮಸ್ಯೆಗಳನ್ನು ನೀಡಬಹುದು ಎಂದು ಮಾಹಿತಿ ಹಂಚಿಕೊಂಡರು.
ಯಶವಂತಪುರದಲ್ಲಿ ಎಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗೋಡೆ ನಿರ್ಮಿಸಿಲ್ಲ. ಆಸ್ಪತ್ರೆಗಾಗಿ ತಡೆಗೋಡೆ ಕಟ್ಟಲಾಗಿದೆ. ಇದರಿಂದ ರೈಲ್ವೇ ನಿಲ್ದಾಣ ಹಾಗೂ ಆಸ್ಪತ್ರೆಗೆ ಹೋಗಲು ಹಾಗೂ ವ್ಯಾಪಾರಿಗಳಿಗೂ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆಗೆ 10 ದಿನದಲ್ಲಿ ಹೊಸ ಮಾರ್ಗಸೂಚಿ: ಶಿವರಾಮ್ ಹೆಬ್ಬಾರ್
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುನಿರತ್ನ, ಪಕ್ಷದ ವರಿಷ್ಠರು ಈ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಉತ್ತರಿಸಿದರು.