ಬೆಂಗಳೂರು: ಇಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟ್ವಿಟ್ಟರ್ ನಲ್ಲಿ ಸ್ವಾಗತ ಕೋರಿ ಟಾಂಗ್ ಕೊಟ್ಟಿದ್ದಾರೆ.
`ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಸ್ವಾಗತ. ನಮ್ಮ ಸರ್ಕಾರ 3,500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದು, ಲಕ್ಷಾಂತರ ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಮಹಿಳೆಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ಬಸವಣ್ಣ ಅವರ ಅನುಯಾಯಿಗಳನ್ನು ಒಗ್ಗೂಡಿಸಿದೆ. ನಿಮ್ಮ 3 ಜನ ಸಿಎಂ ಏನು ಮಾಡಿದ್ದಾರೆ? ಎಂದು ಟ್ವಿಟ್ಟರ್ನಲ್ಲಿ ಪ್ರಧಾನಿಗೆ ಎಂ.ಬಿ.ಪಾಟೀಲ್ ಪ್ರಶ್ನೆ ಹಾಕಿದ್ದಾರೆ.
ಜಿದ್ದಾಜಿದ್ದಿನ ಕಣವಾಗಿರುವ ಬಸವಣ್ಣನ ನಾಡು ವಿಜಯಪುರದಲ್ಲಿಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೃಹತ್ ಪ್ರಚಾರ ಸಮಾವೇಶ ನಡೆಸಲಿದ್ದಾರೆ. ಬಬಲೇಶ್ವರದ ಸಾರಗಾಡ ಗ್ರಾಮದಲ್ಲಿ ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅಬ್ಬರಿಸಿದ್ರೆ, ಇಲ್ಲಿಂದ ಕೇವಲ 30 ಕಿ.ಮೀ ಅಂತರದಲ್ಲಿರುವ ವಿಜಯಪುರ ನಗರದ ಬಿಎಲ್ಡಿಇ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸೋನಿಯಾ ಗಾಂಧಿ ಆರ್ಭಟಿಸಲಿದ್ದಾರೆ.
ಸೋನಿಯಾ ಗಾಂಧಿ ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರಕ್ಕಿಳಿಯುತ್ತಿದ್ದು, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಜಾದ್, ಸಿಎಂ ಸಿದ್ದರಾಮಯ್ಯ ಭಾಗಿಯಾಗ್ತಿದ್ದಾರೆ. ಎರಡು ಸಮಾವೇಶದಲ್ಲೂ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
https://twitter.com/reachmbp/status/993450677618839552