ಕೊಪ್ಪಳ: ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ನಮ್ಮ ಗ್ರಹಚಾರ ಸರಿ ಇಲ್ಲ. ನಾಲ್ಕು ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಈಶ್ವರಪ್ಪ, ಜನ ಆಡಳಿತ ಮಾಡಿ ಅಂತಾರೆ. ಆದರೆ ಒಂದು ಕಡಿಮೆ, ನಾಲ್ಕು ಕಡಿಮೆ ಸ್ಥಾನ ಬರತ್ತೆ. ನಾಲ್ಕು ಬಾರಿಯೂ ನಮ್ಮ ಗ್ರಹಚಾರ ಹಾಗೆ ಇತ್ತು ಎಂದರು.
ಇದೇ ವೇಳೆ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವರು, ನಾಲ್ಕು ಬಾರಿ, ಅವನ್ಯಾವನೋ ಕರಕೊಂಡ ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕೆಂದು ಒಪ್ಪಿಕೊಂಡರು. ಆದರೆ ಈ ಬಾರಿ ಹಾಗಾಗಲ್ಲ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಅನೇಕ ಕಡೆ ಓಡಾಡಿದ್ದೇನೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳಿಲ್ಲ ಎಂದರು. ಇದನ್ನೂ ಓದಿ: ಹೋರಿ ತಿವಿದು ನಾಲ್ಕೈದು ಮಂದಿಗೆ ಗಾಯ- ಇಬ್ಬರು ಗಂಭೀರ
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆಯೋ ದುಡ್ಡಿನ ವ್ಯವಹಾರ, ಯಾವ ಚುನಾವಣೆಲ್ಲೂ ನಡೆಯಲ್ಲ. ಮುಕ್ಕಾಲು ಪಾಲು ಚುನಾವಣೆಯಲ್ಲಿ ದುಡ್ಡಿನದ್ದೇ ವ್ಯವಹಾರ ನಡೆಯುತ್ತದೆ. ನಾನು ಸುಳ್ಳು ಹೇಳಲ್ಲ. ನಿಮಗೆ ಹಣ ಯಾರು ಕೊಡ್ತಾರೆ, ತಗೋರಿ, ಅವರು ನಮ್ಮ ಹಣ ನಮಗೆ ಕೊಡ್ತಾರೆ ಅಷ್ಟೇ ಅಂದ್ರು. ಆದರೆ ವೋಟ್ ಹಾಕೋದು ನಿಮಗೆ ಬಿಟ್ಟಿದ್ದು, ಇದಕ್ಕೆ ಕೃಷ್ಣನ ತಂತ್ರ ಎಂದು ಸಚಿವ ಈಶ್ವರಪ್ಪ ಹೇಳಿದ್ರು.