ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ, ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಮೇಲೆ ಕೆರೆಯನ್ನು ಒತ್ತುವರಿ ಆರೋಪ ಕೇಳಿಬಂದಿದೆ.
ಬ್ಯಾಟರಾಯಣಪುರ ಮತಕ್ಷೇತ್ರದ ಸಿಂಗಾಪುರ ಕೆರೆ ಸಮೀಪದಲ್ಲಿಯೇ ಹೊಸ ಅಪಾರ್ಟ್ ಮೆಂಟ್ ನಿರ್ಮಾಣವಾಗುತ್ತಿದ್ದು, ಈ ಕಾರಣಕ್ಕೆ ಕೆರೆಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಾಣವಾಗುತ್ತಿದೆ. ಸದ್ಯ ಸಿಂಗಾಪುರ ಕೆರೆಯ ಎರಡು ಬದಿಗಳಲ್ಲಿ 25 ಅಡಿ ಮಣ್ಣಿನ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೆರೆ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದು, ಅಭಿವೃದ್ಧಿ ಕಾರ್ಯದಲ್ಲಿ ಕೆರೆ ಒತ್ತುವರಿ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಮಾಡಿತ್ತು. ಹೀಗಾಗಿ ಈಗೆ ಕೆರೆ ಒತ್ತುವರಿಯಾಗಿ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಗೆ ಸಚಿವರ ಸಹಕಾರ ಇದೆ ಎನ್ನುವ ಆರೋಪ ಕೇಳಿಬಂದಿದೆ.
ಸರ್ಕಾರದಿಂದ ಕಾಯ್ದೆ ತಿದ್ದುಪಡಿ!
ರಾಜ್ಯದ ಕೆರೆಗಳ ಮೀಸಲು ಪ್ರದೇಶದ 30 ಮೀ. ವ್ಯಾಪ್ತಿಯ ಒಳಗೂ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡಬಹುದು ಎನ್ನುವ ಕಾಯ್ದೆ ತಿದ್ದುಪಡಿಗೆ 2018ರ ಪ್ರಾರಂಭದ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿತ್ತು. ಹೀಗಾಗಿ ‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೆಲವು ನಿಯಮಗಳು-2018’ ಮಸೂದೆಗೆ ಫೆಬ್ರವರಿಯ ಅಧಿವೇಶನಲ್ಲಿ ಅನುಮೋದನೆ ನೀಡಲಾಗಿತ್ತು. ಅನುಮೋದನೆ ಪರಿಶೀಲಿಸಿ ರಾಜ್ಯಪಾಲರು ಕೂಡ ಇದಕ್ಕೆ ಸಹಿ ಹಾಕಿದ್ದು, ಕಾಯ್ದೆ ರೂಪ ಪಡೆದಿದೆ. ಮಾರ್ಚ್ 26ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಮೀಸಲು ಪ್ರದೇಶದ 30 ಮೀ. ಒಳಗೆ ರಸ್ತೆ, ಸೇತುವೆ ಹಾಗೂ ಇತರೆ ಕಾಮಗಾರಿಗಳನ್ನು ನಡೆಸಬಹುದು. ಇಂತಹ ಕಾಮಗಾರಿಗಳಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು ಪ್ರಾಧಿಕಾರ ಅನುಮತಿ ನೀಡಬಹುದು ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಎನ್ಜಿಟಿ ಹೇಳಿದ್ದು ಏನು?
2016 ಮೇ 4 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ), “ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಬಾರದು ಎಂದು ಆದೇಶ ಹೊರಡಿಸಿತ್ತು.