ಶಿವಮೊಗ್ಗ: ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ.
ನಗರದ ಊರಗಡೂರಿನ ಗುಡ್ಡೇಮರಡಿ ದೇವಾಲಯದಲ್ಲಿ ತಾಲೂಕು ದೇವಾಲಯ ಸಮಿತಿಯ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಇಟ್ಟಿರುವ ದೇವರುಗಳ ಹೆಸರುಗಳನ್ನು ಬದಲಾಯಿಸಲು ಸರ್ಕಾರ ಕಾನೂನನ್ನು ರೂಪಿಸಿಲ್ಲ. ಹೀಗಾಗಿ ವೈನ್ ಸ್ಟೋರ್ ಹಾಗೂ ಬಾರ್ಗಳ ಮಾಲೀಕರು ಹೆಸರು ಬದಲಾಯಿಸಲು ಸ್ವಇಚ್ಛೆ ತೋರಬೇಕು. ಇದು ಕೆಲವರ ನಂಬಿಕೆ, ಭಾವನೆಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಇಟ್ಟಿರುವ ದೇವರ ಹೆಸರುಗಳ ಬದಲಾವಣೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದೆ. ಹೆಸರುಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಾರದು ಎಂದೇನಿಲ್ಲ. ಸಚಿವನಾಗಿ ಕೇವಲ ಮನವಿ ಮಾಡಿದ್ದೇನೆ ಅಷ್ಟೇ ಎಂದು ಹೇಳಿದರು.
ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅದರಲ್ಲಿ 100ಕ್ಕೂ ಹೆಚ್ಚು ದೇವಾಲಯಗಳು ಎ ಗ್ರೇಡ್ನಲ್ಲಿವೆ. ಆರ್ಥಿಕ ಸ್ಥಿತಿಗತಿ ಆಧರಿಸಿ ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ದೇವಾಲಯಗಳ ಅಭಿವೃದ್ಧಿಗೆ ಹಣ ಕೇಳಿಕೊಂಡು ಜನ ಬರುತ್ತಾರೆ. ಲಭ್ಯವಿರುವ ಹಣ ಬಳಸಿಕೊಂಡು ದೇವಾಲಯಗಳ ಅಭಿವೃದ್ಧಿಗೆ ಯೋಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.