ಮಂಡ್ಯ: ಬೆಂಬಲಿಗರು ಪ್ರೀತಿಯಿಂದ ನೀಡಿದ ಬೆಳ್ಳಿಯ ಕಿರೀಟವನ್ನು ರಾಕಿಂಗ್ ಸ್ಟಾರ್ ಯಶ್ ಸಮ್ಮುಖದಲ್ಲಿಯೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಿ.ಎಸ್.ಪುಟ್ಟರಾಜು ಹರಾಜು ಹಾಕಿದ್ದು, ಹರಾಜಿನಿಂದ ಬಂದ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ಸಚಿವ ಪುಟ್ಟರಾಜು ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದ ಬೆಂಬಲಿಗರು, ಸಚಿವರಿಗೆ ಸನ್ಮಾನ ಮಾಡಿ ಬೆಳ್ಳಿ ಕಿರೀಟವನ್ನು ನೀಡಿದರು. ಬೆಳ್ಳಿ ಕಿರೀಟ ಸ್ವೀಕರಿಸಲು ನಿರಾಕರಿಸಿದ ಸಚಿವ ಪುಟ್ಟರಾಜು ನೀವು ಅಭಿನಂದಿಸಿ ನೀಡಿದ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಆದರೆ ಬೆಳ್ಳಿ ಕಿರೀಟವನ್ನು ಮಾತ್ರ ಹರಾಜು ಹಾಕಿ, ಆ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ನೀಡೋದಾಗಿ ತಿಳಿಸಿದರು.
ಸುಮಾರು 35 ಸಾವಿರ ಮೌಲ್ಯದ ಬೆಳ್ಳಿ ಕಿರೀಟವನ್ನು ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು 58 ಸಾವಿರ ರೂಪಾಯಿಗಳಿಗೆ ಹಾರಾಜು ಕೂಗಿದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ಸಚಿವ ಪುಟ್ಟರಾಜು ಅವರನ್ನು ಹಾಡಿಹೊಗಳಿದರು.
ಪಾಂಡವಪುರ ತಾಲೂಕಿನ ಜನತೆ ಸಿ.ಎಸ್.ಪುಟ್ಟರಾಜು ಅವರನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದೀರಾ. ನಿಮ್ಮಲ್ಲರ ಆಶೀರ್ವಾದದಿಂದ ಸಿ.ಎಸ್.ಪುಟ್ಟರಾಜು ರಾಜ್ಯದ ಸಣ್ಣ ನೀರಾವರಿ ಸಚಿವರಾಗಿದ್ದರೆ. ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದರು. ಪಾಂಡವಪುರ ಜನತೆ ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಯಶ್ ಸಂತಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv