ಚಿಕ್ಕಬಳ್ಳಾಪುರ: ಗಣಿಗಾರಿಕೆಯಿಂದ ಭೂಕಂಪನಗಳು ಆಗುತ್ತಿದ್ದರೆ ನಾನು ಈ ಕ್ಷಣದಿಂದಲೇ ಗಣಿಗಾರಿಕೆ ನಿಲ್ಲಿಸಲು ತಯಾರಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪದೇ ಪದೇ ಭೂಕಂಪವಾಗುತ್ತಿರುವುದಕ್ಕೆ ಅಸಲಿ ಕಾರಣಗಳನ್ನು ಅಧಿಕಾರಿಗಳು ಹುಡುಕಾಡುತ್ತಿದ್ದರೂ, ಮತ್ತೊಂದೆಡೆ ಜನ ಹಾಗೂ ವಿರೋಧ ಪಕ್ಷದವರು ಭೂಕಂಪನಕ್ಕೆ ಈ ಭಾಗದಲ್ಲಿ ನಡೆಸುತ್ತಿರುವ ಅತಿಯಾದ ಗಣಿಗಾರಿಕೆಯೇ ಕಾರಣ ಎನ್ನುವ ಅನುಮಾನ ಹೊರ ಹಾಕಿದ್ದಾರೆ. ಹೀಗಾಗಿ ವಿಜ್ಞಾನಿಗಳ ಜೊತೆ ಸಚಿವರು ಬಂಡಹಳ್ಳಿ ಗ್ರಾಮದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಒಂದು ವೇಳೆ ಗಣಿಗಾರಿಕೆಯಿಂದಲೇ ಭೂಕಂಪನ ಆಗುತ್ತಿದೆ ಎಂದರೆ ನಾನು ಈ ಕ್ಷಣವೇ ಗಣಿಗಾರಿಕೆ ನಿಲ್ಲಿಸಲು ಸಿದ್ಧನಿದ್ದೇನೆ. ನನ್ನ ಜನರಿಗೋಸ್ಕರ ನಾನು ಗಣಿಗಾರಿಕೆ ನಿಲ್ಲಿಸಲು ಸಿದ್ಧ. ಆದರೆ ಅದು ವೈಜ್ಞಾನಿಕವಾಗಿ ವಿಜ್ಞಾನಿಗಳು ಹೇಳಬೇಕು ಎಂದು ಹೇಳಿದರು.
ಕಂಟ್ರೋಲ್ ಬ್ಲಾಸ್ಟಿಂಗ್ ಬಗ್ಗೆ ಮಾತನಾಡಿದ ಸಚಿವರು, ವಾರಕ್ಕೊಮ್ಮೆ ಸಿಪಿಐ ಲಿಂಗರಾಜು ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನೇತೃತ್ವದ ತಂಡ ಪರಿಶೀಲನೆ ನಡೆಸಬೇಕು. ಯಾರೇ ಕಂಟ್ರೋಲ್ ಬ್ಲಾಸ್ಟಿಂಗ್ ಮಾಡದಿದ್ದರೇ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಳೆದ ಒಂದು ತಿಂಗಳಲ್ಲಿ ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ ಹಾಗೂ ಶೆಟ್ಟಿಗೆರೆ ಗ್ರಾಮಗಳಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದೆ. ರಿಕ್ಟರ್ ಮಾಪನದಲ್ಲೂ, 3 ಬಾರಿ ಭೂಕಂಪನದ ತೀವ್ರತೆಯ ಪ್ರಮಾಣವೂ ದಾಖಲಾಗಿತ್ತು. ಇದರಿಂದ ನೂರಾರು ಮನೆಯ ಗೋಡೆಗಳು ಬಿರುಕುಬಿಟ್ಟಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ
ಭೂಕಂಪನದ ಮುನ್ನ ಬರೋ ಶಬ್ದಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಭೂಕಂಪನದ ಅನುಭವಕ್ಕೆ ಹೆದರಿರುವ ಜನ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳ ತಂಡ ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಇದನ್ನೂ ಓದಿ: ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್ನ ಟ್ರಂಕ್ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್
ಈ ಸಂದರ್ಭದಲ್ಲಿ ಸಚಿವ ಸುಧಾಕರ್ ಜನರ ಮುಂದೆಯೇ ವಿಜ್ಞಾನಿಗಳ ಬಳಿ ಭೂಕಂಪನದ ಕಾರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಿಶೀಲನೆ ನಡೆಸಿದ ವಿಜ್ಞಾನಿಗಳು, ಭೂಕಂಪನಕ್ಕೆ ಹೈಡ್ರೋಸೆಸ್ಮೋಸಿಟಿ ಕಾರಣ. ಈ ಬಾರಿ ಆದ ಅತಿಯಾದ ಮಳೆಯಾದ ಕಾರಣ ಅಂರ್ತಜಲ ಹೆಚ್ಚಳದಿಂದ ಭೂಮಿಯ ಅಂತರಾಳದಲ್ಲಿ ಆಗುತ್ತಿರುವ ಬದಲಾವಣೆಗಳೆ ಭೂಮಿ ಕಂಪಸಿಲು ಕಾರಣ ಎಂದು ತಿಳಿಸಿದ್ದಾರೆ.