ಧಾರವಾಡ: ಶಿವಸೇನೆ ನೇತೃತ್ವದ ಸರ್ಕಾರ ಬಂದ ಮೇಲೆ ಉದ್ಧವ್ ಠಾಕ್ರೆ ವಿನಾಕಾರಣ ಗಡಿ ವಿಚಾರವಾಗಿ ಪ್ರಕ್ಷುಬ್ಧ ವಾತಾವಾರಣ ಸೃಷ್ಟಿಸುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಅನೋನ್ಯವಾಗಿದ್ದಾರೆ. ಬೆಳಗಾವಿ ಕರ್ನಾಟಕ ಭಾಗವಾಗಿ ಹೋಗಿದೆ. ಉದ್ಧವ್ ಠಾಕ್ರೆ ಗಡಿ ತಂಟೆಗೆ ಮತ್ತೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ಬಿಟ್ಟು ಸರಿಯಾದ ಆಡಳಿತ ಮಾಡಿಕೊಂಡು ಹೋಗವ ಬಗ್ಗೆ ಗಮನವಹಿಸಬೇಕು ಎಂದರು.
ಶಿವಸೇನೆಗೆ ಸರ್ಕಾರ ಮಾಡಲು ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಹೀಗಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷದವರು ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಬೇಕು. ಭೀಮಾಶಂಕರ ಪಾಟೀಲ್ ಕನ್ನಡಿಗರ ರಕ್ಷಣೆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಮಹದಾಯಿ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಈ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಸೌಹಾರ್ದತೆ ಸೃಷ್ಟಿಸಿಕೊಂಡು ಬಗೆ ಹರಿಸಬೇಕಿದೆ. ಕಾಂಗ್ರೆಸ್ ಇಷ್ಟು ದಿನ ಈ ಕಾರ್ಯ ಮಾಡಿಲ್ಲ. ಗೋವಾ ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಉತ್ತರ ಕರ್ನಾಟಕ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, ಹುಬ್ಬಳ್ಳಿ, ದಾವಣಗೆರೆ ರಾಜಧಾನಿಯಾಗಿದ್ದರೆ ನಮ್ಮಿಂದೇನು ಆಗುತ್ತಿರಲಿಲ್ಲ ಎಂದು ಹೇಳಿರುವುದು ಸರಿಯಲ್ಲ. ಉತ್ತರ ಕರ್ನಾಟಕ ಬಗ್ಗೆ ಅವರು ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂಬುವುದು ಇದರಲ್ಲಿ ಸ್ಪಷ್ಟವಾಗಿದೆ. ಸರ್ಕಾರದ ಗೋಮಾಳವನ್ನು ಅವರು ಏಸು ಪ್ರತಿಮೆಗೆ ಕೇಳಿಯೇ ಇಲ್ಲ. ಸರ್ಕಾರವನ್ನು ಕೇಳದೆಯೇ ಅವರು ಜಾಗ ಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾಗುತ್ತೋ, ಪುನರ್ ರಚನೆಯಾಗುತ್ತೋ ಅದೆಲ್ಲವೂ ಸಿಎಂಗೆ ಬಿಟ್ಟ ವಿಚಾರ, ಇದರಲ್ಲಿ ಅವರಿಗೆ ಪರಮಾಧಿಕಾರ ಇದೆ ಎಂದರು.