– ಕೆ.ಎರ್.ಪೇಟೆಯಲ್ಲಿ ಚುನಾವಣೆ, ತುರುವೇಕೆರೆಯಲ್ಲಿ ಮತಯಾಚನೆ
– ಮಾವಿನಹಳ್ಳಿಯ ಕೆರೆ ತುಂಬಿಸಿದ್ದೇನೆ, ನನಗೆ ಸಹಾಯ ಮಾಡ್ಬೇಕು
ತುಮಕೂರು: ಕೆ.ಆರ್.ಪೇಟೆ ಉಪ ಚುನಾವಣೆ ಉಸ್ತುವಾರಿ ಹೊತ್ತ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತುಮಕೂರು ಜಿಲ್ಲೆಯಲ್ಲಿ ಮತಯಾಚನೆ ಮಾಡಿದ್ದಾರೆ.
ತುರುವೇಕೆರೆ ಕ್ಷೇತ್ರದ ಮಾವಿನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಸಚಿವ ಮಾಧುಸ್ವಾಮಿ ಸಾರ್ವಜನಿಕರಲ್ಲಿ ಮತ ಕೇಳಿದ್ದಾರೆ. ಮಾವಿನಹಳ್ಳಿಯ ಕೆರೆ ತುಂಬಿಸಿದ್ದೇನೆ. ಹಾಗಾಗಿ ನೀವು ನನಗೆ ಸಹಾಯ ಮಾಡಬೇಕು. ಕೆ.ಆರ್.ಪೇಟೆಯಲ್ಲಿ ನಿಮ್ಮ ಬಂಧು-ಬಳಗ ಇದ್ದರೆ ಒಂದ್ ವೋಟ್ ಹಾಕಿಸಿ ಎಂದು ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೆ.ಆರ್.ಪೇಟೆ ಚುನಾವಣೆ: 2018ರಲ್ಲಿ ಕೇವಲ 9,819 ಮತ ಗಳಿಸಿದ್ದ ಬಿಜೆಪಿ ಅಭ್ಯರ್ಥಿ
ನನ್ನ ಕಾಲದಲ್ಲಿ ಕೆ.ಆರ್.ಪೇಟೆಯ ಎಲ್ಲಾ ಕೆರೆಯೂ ಭರ್ತಿಯಾಗಿವೆ. ಸಣ್ಣ ನೀರಾವರಿ ಸಚಿವನಾಗಿ ಅನೇಕ ಕೆಲಸ ಮಾಡಿದ್ದೇನೆ. ನನ್ನ ಪರವಾಗಿ ಬಿಜೆಪಿ ಅಭ್ಯರ್ಥಿಗೆ ಒಂದ್ ವೋಟ್ ಹಾಕಿ ಅಂತ ನಿಮ್ಮ ಸಂಬಂಧಿಕರಿಗೆ ಕೇಳಿಕೊಳ್ಳಿ ಎಂದು ಸಚಿವರು ತುರುವೇಕೆರೆ ಕ್ಷೇತ್ರದ ಜನರಿಗೆ ಕೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆ.ಆರ್.ಪೇಟೆ ಉಸ್ತುವಾರಿ ಕೊಟ್ಟಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿಲ್ಲ. ಹೀಗಾಗಿ ಕೆಳಮಟ್ಟದಿಂದ ಸಂಘಟನೆ ಕೆಲಸ ಮಾಡಬೇಕಿದೆ ಎಂದು ಸಿಎಂ ಬಳಿ ಹೇಳಿಕೊಂಡಿದ್ದೇನೆ. ಇದಕ್ಕೆ ಸಲಹೆ ನೀಡಿದ ಸಿಎಂ, ನೀನು ಸಣ್ಣ ನೀರಾವರಿ ಸಚಿವನಾಗಿ ಒಳ್ಳೆಯ ಕೆಲಸ ಮಾಡಿರುವೆ. ಅದನ್ನು ಮುಂದಿಟ್ಟುಕೊಂಡು ಮತ ಕೇಳು, ಜಾತಿ ರಾಜಕಾರಣ ಬೇಡ ಎಂದಿದ್ದಾರೆ. ಹೀಗಾಗಿ ನಾನು ಜವಾಬ್ದಾರಿ ಒಪ್ಪಿಕೊಂಡಿರುವೆ. ನೀವೆಲ್ಲಾ ನಿಮ್ಮ ನೆಂಟರಿಷ್ಟರಿಗೆ ಹೇಳಿ ಒಂದು ವೋಟ್ ಹಾಕಿಸಿ ಪುಣ್ಯ ಮಾಡಿ ಎಂದು ಸಚಿವರು ಅಂಗಲಾಚಿದರು.