ಬೆಂಗಳೂರು: ಅರಮನೆ ಆಸ್ತಿ (Bengaluru Palace Property) ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಹೇಳಿದರು.
ವಿಧಾನಸೌಧದಲ್ಲಿಂದು ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಜಾಮ್ನಗರದಲ್ಲಿ ವಿಶ್ವದ ಅತಿದೊಡ್ಡ AI ಡೇಟಾ ಕೇಂದ್ರ ಸ್ಥಾಪನೆ: ಮುಕೇಶ್ ಅಂಬಾನಿ ಪ್ಲ್ಯಾನ್
ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ (Ordinance) ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದ್ರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಹಬ್ಬ – ಸಾರ್ವಜನಿಕರಿಗೆ ಎಂಟ್ರಿ: ಯು.ಟಿ ಖಾದರ್
ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧುವಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ನಾವು ಅಫಿಡವಿಟ್ ಹಾಕಬೇಕಿದೆ ಎಂದು ವಿವರಿಸಿದರು.
1996 ರಿಂದ ಇಲ್ಲಿಯವರೆಗೆ ಹಲವು ವರ್ಷ ಗತಿಸಿವೆ. 1996ರ ನವೆಂಬರ್ 15 ರಂದು ಮೊದಲು ಭೂಮಿ ಸ್ವಾಧೀನಕ್ಕೆ ಕಾನೂನು ಮಾಡಲಾಗಿತ್ತು. ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗಲೂ ಕೋರ್ಟ್ ಈ ಕಾನೂನನ್ನ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ರಾಜವಂಶಸ್ಥರು 1997ರಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗಾಗಲೇ 27 ವರ್ಷಗಳು ಮುಗಿದು ಹೋಗಿವೆ. ರಸ್ತೆ ಅಗಲೀಕರಣ ವಿಚಾರದಲ್ಲೇ ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಮತ್ತೆ ಈ ವ್ಯಾಜ್ಯ ಮುನ್ನೆಲೆಗೆ ಬಂದಿದೆ. ಅಂದು ಪೂರ್ತಿ ಭೂಮಿ ಸ್ವಾಧೀನಪಡಿಸಿಕೊಳ್ಳಲು 11 ಕೋಟಿ ರೂ. ಗಳಿಗೆ ಲೆಕ್ಕಾ ಹಾಕಿದ್ದೆವು. ಅಂದು ಪ್ರತಿ ಎಕರೆಗೆ 2.30 ಲಕ್ಷ ರೂ. ಆಗುತ್ತಿತ್ತು. ಆದ್ರೆ ಈಗ ಪ್ರತಿ ಎಕರೆಗೆ 200 ಕೋಟಿ ರೂ. ಆಗುತ್ತದೆ ಎಂದು ಸಚಿವರು ತಿಳಿಸಿದರು.
ಮುಂದುವರಿದು… ಇಲ್ಲಿಯವರೆಗೆ ಹೈಕೋರ್ಟ್ ತೀರ್ಪಿಗೆ ತಡೆ ಇರಲಿಲ್ಲ. 2024ರ ಡಿ.10 ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್ ಅನ್ನ ಮೌಲ್ವೀಕರಿಸಲಾಯಿತು. 15.36 ಎಕರೆ ಭೂಮಿಗೆ ಟಿಡಿಆರ್ ಒಪ್ಪಂದವಾಗಿ, ಪ್ರತಿ ಎಕರೆಗೆ 200 ಕೋಟಿ ರೂ. ವ್ಯಾಲ್ಯೂ ಬಂತು. ಹಾಗಾಗಿ 3,016 ಕೋಟಿ ನಾವು ಟಿಡಿಆರ್ ಕೊಡಬೇಕಿತ್ತು. ಇದರಿಂದ ಅಭಿವೃದ್ಧಿಗೆ ಗಂಡಾಂತರವಾಗುತ್ತದೆ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರ ಮಿಲಿಟರಿ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – 8 ಮಂದಿ ಸಾವು