ಬೆಂಗಳೂರು: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಅಂತ ರಾಜ್ಯ ಸರ್ಕಾರ ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಕ್ರಮದ ವಾಸನೆ ಕೇಳಿ ಬಂದಿದೆ. ಅಕ್ರಮ ನಡೆದಿರೋದನ್ನ ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಒಪ್ಪಿಕೊಂಡಿದ್ದಾರೆ. ಅಲ್ಲದೇ ಅಕ್ರಮದ ತನಿಖೆಗೂ ತಂಡ ರಚನೆ ಮಾಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರ ನೀಡಿದರು. ರಾಜ್ಯದಲ್ಲಿ 17154 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಇವುಗಳ ಪೈಕಿ 12602 ಘಟಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಅಂತ ಸಚಿವರು ಮಾಹಿತಿ ಕೊಟ್ಟರು. ಸುಮಾರು 4552 ಘಟಕಗಳು ಕೆಲಸ ಮಾಡದೆ ಸ್ಥಗಿತಗೊಂಡಿವೆ. ಹೊಸದಾಗಿ 8142 ಘಟಕಗಳನ್ನು 134 ಪ್ಯಾಕೇಜ್ ಮಾಡಿ ಪ್ರಾರಂಭ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅಕ್ರಮ ಆಗಿದೆ ಅಂತ ಒಪ್ಪಿಕೊಂಡರು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಅಕ್ರಮ ನಡೆದಿದೆ. ಅಕ್ರಮದ ಬಗ್ಗೆ ವರದಿ ನೀಡಲು IPSOS Research private Ltd ಅನ್ನೊ ಸಂಸ್ಥೆಗೆ ನೀಡಿದ್ದೇವೆ. ಏಪ್ರಿಲ್ ಕೊನೆ ವಾರದಲ್ಲಿ ಈ ಸಂಸ್ಥೆ ವರದಿ ಕೊಡುತ್ತಾರೆ. ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತಗೋತೀನಿ ಅಂತ ತಿಳಿಸಿದರು. ಅಲ್ಲದೆ ಈ ಸಂಸ್ಥೆ ವರದಿ ಕೂಡ ಸರಿಯಾಗಿ ಇಲ್ಲ ಅಂದರೆ ಸದನ ಸಮಿತಿ ರಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳೋ ಭರವಸೆಯನ್ನ ಸಚಿವರು ನೀಡಿದರು.