– ತೆರೆಮರೆಯಲ್ಲೇ ಶಾಸಕ ಆನಂದ್ ಸಿಂಗ್, ನಾಗೇಂದ್ರರನ್ನು ಹೊಡೆದುರುಳಿಸಿದ್ರಾ ಕನಕಪುರ ಬಂಡೆ!
ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಯಲ್ಲಿ ರಾಜಕೀಯವಾಗಿ ಗೇಮ್ ಆಡಲು ಶುರುಮಾಡಿದ್ದು, ಹೆಚ್ಚು ಪ್ರಭಾವಿಗಳಲ್ಲದ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಳ್ಳಾರಿಯಿಂದ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ತುಕಾರಂ ಅವರ ಹೆಸರನ್ನು ಸೂಚನೆ ಮಾಡಲಾಗಿದೆ. ಆದರೆ ಬಳ್ಳಾರಿಂದ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಮತ್ತು ಆನಂದ್ ಸಿಂಗ್ ಮಂತ್ರಿ ಸ್ಥಾನ ಸಿಗುತ್ತದೆ ಎಂದು ತುಂಬಾ ಅಪೇಕ್ಷೆ ಇಟ್ಟುಕೊಂಡಿದ್ದರು. ಬಂಡಾಯ ಶಾಸಕರ ಪಟ್ಟಿಯಲ್ಲಿಯೂ ಇಬ್ಬರ ಹೆಸರು ಬಲವಾಗಿ ಕೇಳಿಬಂದಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಟ್ಟು ಪ್ರಭಾವಿಗಳಲ್ಲದ ಇಬ್ಬರು ನಾಯಕರಿಗೆ ಸಚಿವಗಿರಿ ಕೊಡಲಾಗುತ್ತಿದೆ. ಈ ಮೂಲಕ ನಾಗೇಂದ್ರ ಮತ್ತು ಆನಂದ್ ಸಿಂಗ್ ಮಂತ್ರಿಯಾದರೇ ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯವಿರುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಅವರಿಬ್ಬರ ಮಂತ್ರಿ ಸ್ಥಾನಕ್ಕೆ ಕೊಕ್ಕೆ ಹಾಕಿದ್ದಾರೆ ಎಂದು ಬಳ್ಳಾರಿ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣೆಯಲ್ಲೂ ಕೂಡ ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದರು. ಇನ್ನು ಮುಂದೆಯೂ ತಮ್ಮ ಪ್ರಾಬಲ್ಯವನ್ನು ಮೆರೆಯಲು ಹೆಚ್ಚು ಪ್ರಭಾವಿಗಳಲ್ಲದ ನಾಯಕರಿಗೆ ಸಚಿವಗಿರಿ ಕೊಡಿಸಿದ್ದಾರೆ. ಪ್ರಭಾವಿಗಳಾದ ನಾಗೇಂದ್ರ ಮತ್ತು ಆನಂದ್ ಸಿಂಗ್ ಇಬ್ಬರನ್ನು ದೂರವಿಸಿದ್ದಾರೆ. ಪರಮೇಶ್ವರ್ ನಾಯ್ಕ್ ಮತ್ತು ತುಕಾರಂ ನಾಯಕರಿಗೆ ಸಚಿವ ಸ್ಥಾನ ಕೊಡಿಸುವ ಮೂಲಕ ತಮ್ಮ ದಾಳ ಉರುಳಿಸಲು ಅನುಕೂಲ ಮಾಡಿಕೊಂಡಿದ್ದು, ಬಳ್ಳಾರಿಯಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ಪ್ರಾಬಲ್ಯ ಮೆರೆಯಲು ಈ ತಂತ್ರ ರೂಪಿಸಿದ್ದಾರೆ ಎಂಬ ಚರ್ಚೆಗಳು ಆರಂಭಗೊಂಡಿವೆ.
ತುಕಾರಂ ಪಿ.ಟಿ ಪರಮೇಶ್ವರ್ ನಾಯ್ಕ್
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಾಗೇಂದ್ರ ಮತ್ತು ಆನಂದ್ ಸಿಂಗ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಇಬ್ಬರು ಪ್ರಭಾವಿ ನಾಯಕರು ಕೂಡ ಅಸಮಾಧಾನಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv