ಮಂಡ್ಯ: ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಿದ ಲೋಕೋಪಯೋಗಿ ಸಚಿವ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರಲ್ಲಿ ನಿಖಿಲ್ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ‘ಕಾಲು ಮುಗಿಯುತ್ತೇನೆ, ತಪ್ಪು ಮಾಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕೋರಿದ್ದಾರೆ.
ಮಳವಳ್ಳಿ ತಾಲೂಕಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಎಲ್ಲಾ ಕಾಂಗ್ರೆಸಿನ ಮಾಜಿ ಶಾಸಕರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಎಲ್ಲಾ ಕಾರ್ಯಕರ್ತರಿಗೆ ಕಾಲು ಮುಗಿದು ಕೇಳಿಕೊಳ್ಳುತ್ತೇನೆ. ಯಾರು ತಪ್ಪು ಮಾಡಲು ಹೋಗಬೇಡಿ. ಕ್ಷೇತ್ರದಲ್ಲಿ ನಿಖಿಲ್ ಗೆಲ್ಲುವುದು ಖಚಿತ. ರಾಜ್ಯದ ಮುಖ್ಯಮಂತ್ರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದಾರೆ. ಕೋಟಿ ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅದ್ದರಿಂದ ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ಮಾಡಬೇಡಿ ಎಂದರು.
ಇದೇ ವೇಳೆ ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ ಡಿಕೆ ಶಿವಕುಮಾರ್ ಅವರು, ಎಲ್ಲಾ ಕಾರ್ಯಕರ್ತರಿಗೆ ನನ್ನ ಮನೆಬಾಗಿಲು ತೆರೆದಿರುತ್ತದೆ. ಬಂದು ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಶಾಸಕ ಅನ್ನದಾನಿ ಅವರಿಗೂ ಹೇಳಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ತಿಳಿಸಿದ್ದೇನೆ. ಆದರೆ ಬಹಳ ಜನ ಮುಖಂಡರು ಈ ಸಭೆಗೆ ಹೋಗ ಬೇಡ ಎಂದು ಹೇಳಿ ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಇದು ಪಕ್ಷದ ತೀರ್ಮಾನ, ರಾಹುಲ್ ಗಾಂಧಿ ತೀರ್ಮಾನ. ಕೆಲವೊಂದು ಬಾರಿ ಬೇರೆ ಯಾವ ಪಕ್ಷವೂ ಏನು ಮಾಡಲು ಸಾಧ್ಯ ಇಲ್ಲ. ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಬಿಜೆಪಿ ಅವರಿಗೆ ದ್ವೇಷ ಬಿಟ್ಟರೆ, ದೇಶ ಭಕ್ತಿ ಇಲ್ಲ. ರಾಜ್ಯದಲ್ಲಿ ಸರ್ಕಾರ ತೆಗೆಯಲು ಹೊರಟ್ಟಿದ್ದು, ಆದರೆ ಅದು ಸಾಧ್ಯವಿಲ್ಲ ಯಡಿಯೂರಪ್ಪನವರೇ ಎಂದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಲು ಸಾಧ್ಯವಿಲ್ಲ. ಮೈಸೂರು, ಬೆಂಗಳೂರು ನಿಲ್ಲಿ, ನಿಮ್ಮನ್ನು ಎಂಎಲ್ಸಿ ಮಾಡುತ್ತೇವೆ ಅಂದರೂ ಸುಮಲತಾ ಕೇಳಲಿಲ್ಲ. ಅಂಬರೀಶ್ ಅವರು ಸಾಯುವ ಮುನ್ನ ಮೈತ್ರಿ ಸರ್ಕಾರಕ್ಕೆ, ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ. ನಿಖಿಲ್, ಅಭಿಷೇಕ್ ಇಬ್ಬರು ಸೋದರರಂತೆ ಇರಬೇಕೆಂಬ ಮಾತನ್ನು ಹೇಳಿದ್ದರು. ನಿಖಿಲ್ಗೆ ಮತ ನೀಡಿ ಬೆಂಬಲ ನೀಡಿ ಬೆಂಬಲ ನೀಡಿ ಎಂದರು.