ದಾವಣಗೆರೆ: ಹದ್ದು ಮತ್ತು ಗಿಣಿ ಪರಸ್ಪರ ಕುಕ್ಕಿಸಿಕೊಳ್ಳಲಿ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರು ಹದ್ದು ಎಂದು ಹೇಳಿದ್ದಾರೆ. ಅವರು ಪರಸ್ಪರ ಕುಕ್ಕಿಸಿಕೊಳ್ಳಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ಅದರ ಬಗ್ಗೆ ನಾನು ಬಹಳ ಮಾತನಾಡುವುದಿಲ್ಲ ಎಂದರು.
ಇದೇ ವೇಳೆ ಜಿ.ಟಿ ದೇವೇಗೌಡ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಬಗ್ಗೆಯೂ ನಮ್ಮಲ್ಲಿ ಅಸ್ಪೃಶ್ಯತೆ ಇಲ್ಲ. ಜಿ.ಟಿ.ಡಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರು ಬೇಕಾದರೂ ಬರಬಹುದು ಅವರಿಗೆ ಸ್ವಾಗತ ಎಂದರು.
ಮಾಜಿ ಸಚಿವ ಸಾರಾ ಮಹೇಶ್, ವಿಶ್ವನಾಥ್ ಪದ ಬಳಕೆ ಬಗ್ಗೆ ಕುರಿತು ಮಾತನಾಡಿದ ಅವರು, ಅವಾಚ್ಯ ಪದಗಳು ರಾಜಕಾರಣಿಗೆ ಶೋಭೆ ತರುವುದಿಲ್ಲ. ಈಗಾಗಲೇ ರಾಜಕಾರಣಿಗಳೆಂದರೆ ಗೌರವ ಇಲ್ಲದಂತಾಗಿದೆ. ಪರಸ್ಪರ ನಾವೇ ಕೆಸರೆರಚಾಡಿಕೊಳ್ಳೋದು ಸರಿಯಲ್ಲ. ಅಲ್ಲದೆ ಮಾಜಿ ಸಚಿವರು ಆಡಿದ ಮಾತುಗಳು ಮೈಸೂರಿನ ಸಭ್ಯತೆಗೆ ಸಂಸಕೃತಿಗೆ ತಕ್ಕ ಭಾಷೆ ಬಳಸಿಲ್ಲ. ಇದರಿಂದ ಸಭ್ಯ ರಾಜಕಾರಣಿಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದರು.
ಸ್ಪರ್ಧೆ ಇರುವ ಕಡೆ ಪೈಪೋಟಿ ಇದ್ದೇ ಇರುತ್ತದೆ. ಟಿಕೆಟ್ ಯಾರಿಗೆ ಎಂದು ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತದೆ. ನಮ್ಮ ಸರ್ಕಾರ ಬರಲು ರಾಜೀನಾಮೆ ಕೊಟ್ಟ ಶಾಸಕರು ಪ್ರತ್ಯಕ್ಷ ಪರೋಕ್ಷವಾಗಿ ಕಾರಣರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.