ಚಿಕ್ಕಮಗಳೂರು: ಮಾಜಿ ಸಚಿವ ಸಿಎಂ ಇಬ್ರಾಹಿಂ ಜೀವನಕ್ಕಿಂತ ದೇವದಾಸಿರ ಜೀವನ ಪವಿತ್ರವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 14 ಜನರನ್ನ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ದೇವದಾಸಿಯರಿಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. ದೇವದಾಸಿಯವರ ಬದುಕು ಅವರಿಗೆ ಗೊತ್ತಿಲ್ಲ. ಅವರದ್ದು ಪವಿತ್ರವಾದ ಬದುಕು. ಕಲೆಯ ಜೊತೆ ಸಮರ್ಪಿತವಾದಂತ ಬದುಕು ಅವರದ್ದು. ಅವರಿಗೆ ಅಪಮಾನ ಮಾಡಿದ್ದಾರೆ. ದೇವದಾಸಿಯರಿಗೆ ಅಪಮಾನ ಮಾಡಿರೋದನ್ನ ನಾನು ಖಂಡಿಸುತ್ತೇನೆ ಎಂದರು.
ಅದಕ್ಕೂ ಮುಂಚೆ ಅವರ ಜೀವನ ಹೇಗೆ, ಸಿಎಂ ಇಬ್ರಾಹಿಂ ಜೀವನ ಹೇಗೆ ಎಂದು ಅವರೇ ಹೋಲಿಕೆ ಮಾಡಿಕೊಳ್ಳಲಿ ಎಂದಿದ್ದಾರೆ. ಇಬ್ರಾಹಿಂ ಜೀವನಕ್ಕಿಂತ ದೇವದಾಸಿಯರ ಬದುಕು ಪವಿತ್ರವಾಗಿದೆ ಎಂದು ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಇಬ್ರಾಹಿಂ ಹೇಳಿದ್ದೇನು?
ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಜನರದ್ದು ದೇವದಾಸಿಯವರ ಪರಿಸ್ಥಿತಿಯಂತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ರೇಣುಕಾಚಾರ್ಯ ಇವರೆಲ್ಲ ಬಸ್ ಸ್ಟಾಂಡ್ ಬಸವಿಯರು. ಇಂತವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಮೂಲ ಬಿಜೆಪಿಗರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಅವರು ಇಷ್ಟು ದಿನ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಪಟ್ಟದ ರಾಣಿಯನ್ನು ಬಿಟ್ಟು, ಕುಣಿಯೋ ರಾಣಿ ಹಿಂದೆ ಹೋದವರಿಗೆ ಬಿಜೆಪಿ ಸ್ಥಾನ ನೀಡುತ್ತಿದೆ. ಹಾಗಾಗಿ ಪಟ್ಟದ ರಾಣಿ ಇದ್ದವರು ನಮಗೂ ಸಚಿವ ಸ್ಥಾನ ಬೇಕೆಂದು ಹೇಳುತ್ತಿದ್ದಾರೆ. ಈ ಕಗ್ಗಂಟನ್ನು ಸಿಎಂ ಪರಿಹರಿಸಬೇಕಿದೆ ಎಂದಿದ್ದರು.