ಹಾವೇರಿ: ಕುಮಾರಸ್ವಾಮಿ ಮಹಾನ್ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೆ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೆ ಕುಮಾರಸ್ವಾಮಿ. ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗೋದಿಲ್ಲ. ಜನರು ಅವರನ್ನ ಆಯ್ಕೆ ಮಾಡ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡೋದಿಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಮಾಜಿ ಸಿ.ಎಂ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಮೀನನ್ನು ಹೊರಗೆ ಹಾಕಿದಂತಾಗಿದೆ. ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಬೇರೆ ಯಾರೂ ಅವರ ಮುಖ್ಯಮಂತ್ರಿ ಸ್ಥಾನ ಕಳೆದಿಲ್ಲ. ಅವರಲ್ಲಿರುವ ಸ್ವಾರ್ಥ ಭಾವನೆ, ಎರಡು ಜಿಲ್ಲೆಗೆ ಸೀಮಿತವಾದ ರಾಜ್ಯದ ಆಡಳಿತ ಇತ್ತು. ಹೀಗಾಗಿ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತಾ ಕೆಳಗಿಳಿಸಿದ್ದೇವೆ.
ಹಿರೇಕೆರೂರಲ್ಲಿ ಅಭಿವೃದ್ಧಿ ನೋಡಬೇಕು ಅಂದ್ರೆ ನಮಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಿಲ್ಲ. ನಮಗೆ ಜನತೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರು ಕೊಟ್ಟಿದ್ದಲ್ಲ, ಅವರಪ್ಪಾರ ಕಾಲದಲ್ಲಿ ಕೊಟ್ಟಿದ್ದು. ಅದರಿಂದಲೆ ಇನ್ನೂ ಅಭಿವೃದ್ಧಿ ನಡಿತಿದೆ. ದೇವೇಗೌಡರ ಕಾಲದಲ್ಲಿ ಕೊಟ್ಟಿದ್ದರಲ್ಲೇ ನಾವಿನ್ನೂ ಅಭಿವೃದ್ಧಿ ಮಾಡ್ತಿದ್ದೇವೆ ಅಂತಾ ಕುಮಾರಸ್ವಾಮಿಗೆ ಲೇವಡಿ ಮಾಡಿದರು. ಇದನ್ನೂ ಓದಿ: ಕಾಬೂಲ್ನಿಂದ ಉಕ್ರೇನ್ ವಿಮಾನ ಹೈಜಾಕ್
ಅಧಿಕಾರ ಯಾರ ಮನೆಯೂ ಸ್ವತ್ತಲ್ಲ. ಅಧಿಕಾರ ನಮ್ಮ ಮನೆ ಸ್ವತ್ತು ಅಂತಾ ಯಾವ ಮೂರ್ಖನೂ ಹೇಳಲ್ಲ. ಯಾವ ಜನ ಯಾವ ಸರ್ಕಾರದ ಮೇಲೆ ಆಶೀರ್ವಾದ ಮಾಡ್ತಾರೆ, ಅಲ್ಲಿವರೆಗೂ ಆ ಸರ್ಕಾರ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರೀತಿ ಯಾವ ಸರ್ಕಾರದ ಮೇಲಿರುತ್ತೆ ಅಲ್ಲಿವರೆಗೂ ಆ ಸರ್ಕಾರ ಇರುತ್ತದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕುಮಾರಸ್ವಾಮಿ ಅಧಿಕಾರ ಶಾಶ್ವತ ಅಂತಾ ತಿಳ್ಕೊಂಡಿರಬೇಕು. ಆದರೆ ಹಾಗಾಗಿಲ್ಲ. ಕುಮಾರಸ್ವಾಮಿ ಹಿರೇಕೆರೂರಿಗೆ ಬಂದಾಗ ನಾನೆ ಮಾಲೆ ತಗೊಂಡು ಹೋಗಿ ಹಾಕಿ, ಸ್ವಾಗತ ಮಾಡಿ ಮನೆಗೆ ಕರ್ಕೊಂಡು ಹೋಗಿ ಟೀ ಕುಡಿಸಿ ಕಳಿಸ್ತಿದ್ದೆ. ನೀವೆಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸ್ತೀರಿ ಅಂತಾ ಅದನ್ನ ಮಾಡಿಲ್ಲ ಎಂದರು.