ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಕಾಳಜಿ ಇಲ್ಲ. ಅವರು ಕೇವಲ ರಾಜಕೀಯ ಲಾಭಕ್ಕೆ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಈ ಪಾದಯಾತ್ರೆ ಮಾಡುತ್ತಿದೆ. ಅಪಪ್ರಚಾರದ ಮೂಲಕ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ನೀರಿನ ಯೋಜನೆಯ ಲಾಭ, ಅನುಕೂಲತೆ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಈ ಪಾದಯಾತ್ರೆ ಮಾಡುತ್ತಿರುವುದು ಡಿಕೆಶಿ ಅವರ ಈವೆಂಟ್ ಮ್ಯಾನೇಜ್ಮೆಂಟ್ನ್ನು ತೋರ್ಪಡಿಸಲಷ್ಟೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಕನಕಪುರ ಕ್ಷೇತ್ರದಲ್ಲೇ ಏಳು ನೀರಾವರಿ ಯೋಜನೆಗಳು ನಡೆಯುತ್ತಿವೆ. 2007ರಿಂದ ನಡೆಯುತ್ತಿದ್ದರೂ ಈ ಯೋಜನೆಗಳು ಮುಗಿದಿಲ್ಲ. ತಮ್ಮ ಕ್ಷೇತ್ರದಲ್ಲೇ ನೀರಾವರಿ ಯೋಜನೆಗಳನ್ನು ಮಾಡದವರು ಮೇಕೆದಾಟು ಮಾಡುತ್ತಾರಾ ಎಂದು ಡಿಕೆಶಿಗೆ ಟಾಂಗ್ ನೀಡಿದರು.
ನಮ್ಮ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಬದ್ಧವಾಗಿದೆ. ಅಗತ್ಯ ಅನುಮತಿಗಳನ್ನು ಪಡೆಯುವ ನಿಟ್ಟಿನಲ್ಲಿ ಮುಂದುವರೆಯುತ್ತೇವೆ. ಯೋಜನೆಗೆ ಬೇಕಾದ ಎಲ್ಲಾ ಸಂಸ್ಥೆಗಳ ಅನುಮತಿಯನ್ನು ತ್ವರಿತವಾಗಿ ಪಡೆಯುವ ಕೆಲಸ ಮಾಡುತ್ತೇವೆ. ಭೂಸ್ವಾಧೀನ ಬಗ್ಗೆಯೂ ಕಾಂಗ್ರೆಸ್ ಇದ್ದಾಗ ಕ್ರಮ ಕೈಗೊಂಡಿಲ್ಲ. ಆದಷ್ಟು ವೇಗವಾಗಿ, ಶೀಘ್ರದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ನಾವು ತರುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಿಸುವ ಕೆಲಸವೂ ಆಗುತ್ತದೆ. ಕೋವಿಡ್ ಇದ್ದರೂ, ಕಾಂಗ್ರೆಸ್ ಇಲ್ಲ ಎನ್ನುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಪಾದಯಾತ್ರೆ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತವೆ ಎಂದ ತಿಳಿಸಿದರು. ಇದನ್ನೂ ಓದಿ: ಜನಸಾಮಾನ್ಯರಿಗೊಂದು, ಕಾಂಗ್ರೆಸ್ಗೆ ಒಂದು ಕಾನೂನು ಇಲ್ಲ: ಆರಗ ಜ್ಞಾನೇಂದ್ರ
ಡಿಕೆಶಿ ಮತ್ತು ಎಂ.ಬಿ.ಪಾಟೀಲ್ ನಡುವೆ ಸಾಕಷ್ಟು ಯುದ್ಧ ಇದೆ. ಸಿದ್ದರಾಮಯ್ಯ, ಡಿಕೆಶಿ, ಎಂ.ಬಿ.ಪಾಟೀಲ್ ಈ ತ್ರಿಮೂರ್ತಿಗಳಿಂದ ಮೇಕೆದಾಟು ಯೋಜನೆ ವಿಳಂಬವಾಗಿದೆ. ಇದರ ಬಗ್ಗೆ ಈ ಮೂವರು ಜನರಿಗೆ ಸ್ಪಷ್ಟತೆ ನೀಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ
ಸಿಎಂ ಈಗ ಇದರ ಬಗ್ಗೆ ಚರ್ಚೆ ನಡೆಸಲು ಕರೆದಿದ್ದಾರೆ. ಸಿಎಂ ಜತೆ ಚರ್ಚೆ ನಡೆಸುತ್ತೇವೆ. ರಾಜಕೀಯವಾಗಿಯೂ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ