ಕಾರವಾರ: ಪಾಕಿಸ್ತಾನದ ಜೊತೆ ಕಾಂಗ್ರೆಸ್ ಪಕ್ಷದ ಪ್ರೀತಿ, ವ್ಯಾಮೋಹ ಇಂದು ಹೊಸತಲ್ಲ. ಕಳೆದ 70 ವರ್ಷದಿಂದ ನಡೆದುಕೊಂಡು ಬಂದಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಐಎಸ್ಐ ಮಾಜಿ ಮುಖ್ಯಸ್ಥ ಬರೆದಿರುವ ‘ಸ್ಪೈ’ ಪುಸ್ತಕವನ್ನು ಕಾಂಗ್ರೆಸ್ ದೇಶದಲ್ಲಿ ಬಿಡುಗಡೆ ಮಾಡಿತ್ತು. ಆ ಮೂಲಕ ಪಾಕ್ ಮೇಲಿನ ಪ್ರೀತಿಯನ್ನ ತೋರಿಸಿತ್ತು ಎಂದು ದೂರಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ, ಸದನದ ಮೇಲೆ ದಾಳಿ ಮಾಡಿದ್ದ ಹಾಗೂ ಕಾಶ್ಮೀರದ ದೊಡ್ಡ ಸಮಸ್ಯೆಗೆ ಮುಖ್ಯ ಕಾರಣ ಆಗಿರುವ ಐಎಸ್ಐ ಸಂಸ್ಥೆಯ ಮಾಜಿ ಮುಖ್ಯಸ್ಥ ಬರೆದಿರುವ ಪುಸ್ತಕವನ್ನು ಭಾರತದಲ್ಲಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದರು. ಆದರೆ ಭಾರತಕ್ಕೆ ಆಗಮಿಸಲು ಐಎಸ್ಐ ಮಾಜಿ ಮುಖ್ಯಸ್ಥನಿಗೆ ನಮ್ಮ ಸರ್ಕಾರ ವೀಸಾ ನೀಡಲಿಲ್ಲ. ಆದರೆ ದುರಾದೃಷ್ಟವಶಾತ್ ನಮ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಂತವರೆಲ್ಲ ಸೇರಿ ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದರು ಎಂದು ತಿಳಿಸಿದರು.
ಐಎಸ್ಐ ಪ್ರಮುಖ ಸಂಘಟನಾ ಮುಖ್ಯಸ್ಥರೊಬ್ಬರು ಭಾರತದಲ್ಲಿ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಪಾಕಿಸ್ತಾನ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಯಾರ ಜೊತೆಗಿದೆ ಎಂದು ಕೂಡ ನಿನ್ನೆಯ ಘಟನೆಯಿಂದಲೂ ಅತ್ಯಂತ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಾಕಿಸ್ತಾನದ ಪರವಾಗಿಯೇ ಮೊದಲಿನಿಂದಲೂ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಭಾರತದ ಪರವಾಗಿ ಕಾಂಗ್ರೆಸ್ ಮುಂಚಿನಿಂದಲೂ ಬ್ಯಾಟಿಂಗ್ ಮಾಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ದೇಶಕ್ಕೆ ಒಳ್ಳೆದು ಮಾಡಿಲ್ಲ. ಏಕೆಂದರೆ ಕಾಂಗ್ರೆಸ್ ಮಾನಸಿಕತೆ ದೇಶದ್ರೋಹಿ ಮಾನಸಿಕತೆ. ಒಳ್ಳೆದು ಮಾಡಬೇಕೆಂಬ ಯೋಚನೆ ಸಹ ಮಾಡಿಲ್ಲ. ಕಾಂಗ್ರೆಸ್ ದೇಶ ದ್ರೋಹಿಗಳಿಗೆ ಬೆಂಬಲ ಕೊಡುವ ಪ್ರಣಾಳಿಕೆ ನೀಡಿದೆ ಎಂದು ವಾಗ್ದಾಳಿ ನಡೆಸಿದರು.