ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರು ಮುಖ್ಯಮುಂತ್ರಿ ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಮಾನ ಪ್ರಯಾಣದ ದಾಖಲೆ ಬಿಡುಗಡೆ ಮಾಡುವಂತೆ 24 ಗಂಟೆ ಗಡುವು ನೀಡಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಅನಂತ್ ಕುಮಾರ್ ಸವಾಲ್ ಹಾಕಿದ್ದಾರೆ.
ಪ್ರಚಾರ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅನಂತ್ ಕುಮಾರ್, ಸಿದ್ದರಾಮಯ್ಯಗೆ ನಾನು ಮೂರು ದಿನದಿಂದ ಹೇಳುತ್ತಿದ್ದೇನೆ. ಅಮಿತ್ ಶಾ ಮತ್ತು ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಎಲ್ಲಿಗೆ ಹೋದರು? ದೆಹಲಿಗೆ ಹೋಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಪುರಾವೆ ಇದೆ. ಅದನ್ನು ನಾನು ಬಹಿರಂಗ ಪಡಿಸುತ್ತೇನೆ ಅಂತ ಹೇಳುತ್ತಿದ್ದಾರೆ. ಆದರೆ ಅವರು ಯಾವುದನ್ನು ಬಹಿರಂಗ ಪಡಿಸುತ್ತಿಲ್ಲ. ಅವರು ರಾಜ್ಯದ ಮುಖ್ಯಮಂತ್ರಿ ಭಯಪಡುವ ಅಗತ್ಯ ಇಲ್ಲ. ನಾವೇ ಪ್ರೆಸ್ ಕಾನ್ಫರೆನ್ಸ್ ಮಾಡುತ್ತೇವೆ. ಅಲ್ಲಿಗೆ ಬಂದು ಅವರಲ್ಲಿರುವ ಎಲ್ಲ ಪುರಾವೆಯನ್ನು ಇಟ್ಟರೆ ಅವರು ಸತ್ಯ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಸೋಲುವ ಭೀತಿಯಿಂದ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇನ್ನು 24 ಗಂಟೆ ಸಮಯ ಕೊಡುತ್ತೇನೆ. ಅಷ್ಟರಲ್ಲಿ ಅವರು ದಾಖಲೆ ಬಿಡುಗಡೆ ಮಾಡದಿದ್ದಲ್ಲಿ ಬದಾಮಿ ಹಾಗೂ ಚಾಮುಂಡೇಶ್ವರಿ ಎರಡು ಚುನಾವಣಾ ಕಣದಿಂದ ನಿವೃತ್ತರಾಗವೇಕು ಎಂದಿದ್ದಾರೆ.
ನಾನು ರಾಜ್ಯದ ಜನತೆಗೆ ಹಸಿ ಸುಳ್ಳನ್ನು ಹೇಳುತ್ತಿದ್ದೇನೆ. ಸುಳ್ಳೇ ನಮ್ಮ ಮನೆಯ ದೇವರು. ಆದ್ದರಿಂದ ನಾನು ಜನತೆಯಲ್ಲಿ ಕ್ಷಮೆ ಕೇಳಿ ಎರಡು ಕ್ಷೇತ್ರದ ಸ್ಪರ್ಧೆಯಿಂದ ನಿವೃತ್ತರಾಗುತ್ತಿದ್ದೇನೆಂದು ಅವರು ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅನಂತ್ ಕುಮಾರ್ ವಾಗ್ದಾಳಿ ಮಾಡಿದ್ದಾರೆ.