ಬಳ್ಳಾರಿ: ಇಡೀ ವಿಶ್ವವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ರಾಜ್ಯದ ಜನರನ್ನು ಕೂಡ ಭಯಗೊಳಿಸಿದೆ. ಸಚಿವ ಆನಂದ್ ಸಿಂಗ್ ಸಹ ಕೊರೊನಾಗೆ ಹೆದರಿದ್ದು ತಮ್ಮ ಮಗಳನ್ನು ವಿದೇಶದಿಂದ ವಾಪಸ್ ಕರೆಸಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಸಚಿವ ಆನಂದ್ ಸಿಂಗ್ ಅವರ ಹಿರಿಯ ಪುತ್ರಿ ಇಟಲಿ ದೇಶದ ರೋಮ್ ನಗರದಲ್ಲಿ ಸಿಲುಕಿಕೊಂಡಿದ್ದರು. ಭಾರತಕ್ಕೆ ವಾಪಸ್ ಬರಲು ಆಗದೆ ರೋಮ್ ನಗರದ ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಸಚಿವ ಆನಂದ್ ಸಿಂಗ್ ಸಹ ತಮ್ಮ ಕಳವಳ ವ್ಯಕ್ತಪಡಿಸಿದ್ದರು.
ಆದರೆ ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸಚಿವರ ಪುತ್ರಿಯ ಜೊತೆಯಲ್ಲಿ ರೋಮ್ ನಲ್ಲಿ ಸಿಲುಕಿದ್ದ 15 ಜನ ಕೂಡ ವಾಪಸ್ ಆಗಿದ್ದಾರೆ. ಬೆಂಗಳೂರಿಗೆ ಬಂದ ಸಚಿವರ ಪುತ್ರಿ ಸೇರಿದಂತೆ 15 ಜನರ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ರೋಮ್ನಿಂದ ಬಂದ 16 ಜನರಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ. ಆದರೆ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇರಿಸಿ ನಿಗಾ ಇಡಲಾಗಿದೆ.