ಹುಬ್ಬಳ್ಳಿ: ವೇಗವಾಗಿ ಬಂದ್ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಮಿನಿ ಲಾರಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಡೆದಿದೆ.
ಹಾವೇರಿ ಮೂಲದ ಮಿನಿ ಲಾರಿ ಚಾಲಕ ಶಿವಕುಮಾರ ಹಾಗೂ ಕ್ಲೀನರ್ ಈರಣ್ಣ ಎಂಬವರು ಲಾರಿಯಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಿನಿ ಲಾರಿ ವೇಗವಾಗಿ ಬಂದು ಹಿಂಬದಿಯಿಂದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ನಡುವೆ ಸಿಲುಕಿಕೊಂಡಿದ್ದ ಚಾಲಕ ಶಿವಕುಮಾರ್ರನ್ನು ಸ್ಥಳೀಯರು ಹಾಗೂ ಸಂಚಾರಿ ಪೊಲೀಸರು ಸತತ ಒಂದು ಗಂಟೆ ಕಾಲ ಶ್ರಮವಹಿಸಿ ಲಾರಿಯಿಂದ ಹೊರಗಡೆ ತೆಗೆದಿದ್ದಾರೆ. ಕೊನೆಗೆ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಿ ಶಿವಕುಮಾರ್ ರನ್ನು ಹೊರಗಡೆ ತೆಗೆದು ಅವರ ಪ್ರಾಣವನ್ನು ಕಾಪಾಡಿದ್ದಾರೆ.
ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.