ಹುಬ್ಬಳ್ಳಿ: ನಗರದಲ್ಲಿ ಇಬ್ಬರು ಪ್ರತ್ಯೇಕ ವ್ಯಕ್ತಿಗಳಿಗೆ ಕೆವೈಸಿ ಅಪ್ಡೇಟ್ ಹೆಸರಲ್ಲಿ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊದಲನೇ ಪ್ರಕರಣದಲ್ಲಿ ವಂಚಕರು ವೈದ್ಯರೊಬ್ಬರ ಮೊಬೈಲ್ಗೆ ಸಂದೇಶ ಕಳುಹಿಸಿ, ನಿಮ್ಮ ಸಿಮ್ ಕಾರ್ಡ್ ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಸಿಮ್ ಬಂದ್ ಆಗುತ್ತದೆ ಎಂದಿದ್ದಾರೆ. ಇದನ್ನು ನೋಡಿದ ವೈದ್ಯರು ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿದ್ದಾರೆ. ಅದರ ಮೂಲಕ 44,499 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಶಪಾಂಡೆ ನಗರದ ಡಾ. ನಾರಾಯಣಚಂದ ಹೆಬಸೂರ ವಂಚನೆಗೊಳಗಾದ ವೈದ್ಯ. ಅವರಿಗೆ ಡಿಸೆಂಬರ್ 28ರಂದು ಅಪರಿಚಿತರೊಬ್ಬರು ಎಸ್ಎಂಎಸ್ ಕಳುಹಿಸಿದ್ದರು. ಅದರಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ, ವಿನಯ ಶರ್ಮಾ ಎಂಬಾತ ಮಾತನಾಡಿದ್ದ. ತಾನು ಎಸ್ಬಿಐ ಅಧಿಕಾರಿ ಎಂದು ನಂಬಿಸಿದ್ದ. ಬಳಿಕ ಟೀಮ್ ವೀವರ್ ಆ್ಯಪ್ ಮೂಲಕ ಡೌನ್ಲೋಡ್ ಮಾಡಿಸಿದ್ದ. ಅವರ ಗಮನಕ್ಕೆ ಬಾರದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆಂದು ನಾರಾಯಣಚಂದ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸ್ನೇಹಿತನಿಂದ ಹೊರಬಂತು ಸತ್ಯ
ಇನ್ನೊಂದು ಪ್ರಕರಣದಲ್ಲಿ ವಿಶ್ವೇಶ್ವರ ನಗರದ ನಿವೃತ್ತ ಉದ್ಯೋಗಿ ಕೆ.ಎನ್. ಕರ್ನಲ್ ಅವರಿಗೆ ವಂಚಕರು ವಂಚಿಸಿದ್ದಾರೆ. ಎಸ್ಬಿಐ ಖಾತೆಯ ಇ-ಕೆವೈಸಿ ಅಪ್ಡೇಟ್ ಮಾಡಬೇಕೆಂದು ಕರ್ನಲ್ಗೆ ಸಂದೇಶ ಕಳುಹಿಸಿ, ಎನಿಡೆಸ್ಕ್ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿಸಿದ್ದಾರೆ. ಪ್ರಕರಣದಲ್ಲಿ ಕಸ್ಟಮರ್ ಕೇರ್ ಹಾಗೂ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಇಬ್ಬರು ಮೋಸ ಮಾಡಿದ್ದಾರೆ. ಅದರ ಮೂಲಕ 1,87,000 ರೂಪಾಯಿ ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ
ಅಪರಿಚಿತನೊಬ್ಬ ಡಿ. 27 ರಂದು ಕರ್ನಲ್ ಅವರ ಮೊಬೈಲ್ಗೆ ಸಂದೇಶ ಕಳುಹಿಸಿದ್ದ. ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿದಾಗ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿದ್ದ ನಂತರ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಿಸಿದ್ದ. ಲಾಗ್ ಇನ್ ಮಾಡಿಸಿ ಎಟಿಎಂ ಕಾರ್ಡ್ ವಿವರ ಪಡೆದಿದ್ದ. ಈ ಬಗ್ಗೆ ವಂಚಕ ಕಸ್ಟಮರ್ ಕೇರ್ ಗೆ ಕರೆ ಮಾಡುವಂತೆ ಸೂಚಿಸಿದ್ದರು. ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಪೇಟಿಎಂನಲ್ಲಿ ನಾನು ಹೇಳಿದಂತೆ ಮಾಡಿ ಎಂದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.