ಚಿಕ್ಕಬಳ್ಳಾಪುರ: ಮಾರಾಟಕ್ಕೆ ತಂದಿದ್ದ ಹುಣಸೆ ಹಣ್ಣನ್ನು ತಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲ ದಲ್ಲಾಳಿಗಳು ರೈತರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ಪಟ್ಟಣದ ಮಾರುಕಟ್ಟೆಯಲ್ಲಿ ನಡೆದಿದೆ.
ಮಿಂಡಿಗಲ್ ಗ್ರಾಮದ 50 ವರ್ಷದ ನಾರಾಯಣಸ್ವಾಮಿ ಹಲ್ಲೆಗೊಳಗಾಗಿರುವ ರೈತ. ಹುಣಸೆ ಹಣ್ಣು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದ ರೈತ ನಾರಾಯಣಸ್ವಾಮಿ ಬಳಿಯಿದ್ದ ಹುಣಸೆ ಹಣ್ಣನ್ನ ಬಲವಂತವಾಗಿ ಎಲ್.ಟಿ.ನರಸಿಂಹ ಎಂಬುವರಿಗೆ ಸೇರಿದ ಮಂಡಿಯ ದಲ್ಲಾಳಿಗಳು ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ನಾರಾಯಣಸ್ವಾಮಿ ಈ ಮೊದಲೇ ನಾನು ಟಿ.ಜಿ ಗೋಪಾಲಪ್ಪ ಮಂಡಿಯವರ ಬಳಿ ಅಡ್ವಾನ್ಸ್ ಪಡೆದಿದ್ದೇನೆ ಅವರಿಗೆ ಮಾರಾಟ ಮಾಡುತ್ತೇನೆ ಅಂತ ಹೇಳಿದ್ದಾರೆ.
ಇದರಿಂದ ಕೆರಳಿದ ದಲ್ಲಾಳಿಗಳು ರೈತ ನಾರಾಯಣಸ್ವಾಮಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೈತ ನಾರಾಯಣಸ್ವಾಮಿಯ ಕೈಗೆ ಗಂಭೀರ ಗಾಯವಾಗಿದ್ದು ಸದ್ಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.