ಬೆಂಗಳೂರು: ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮತ್ತೆ ಮಂಗಳವಾರ ಕೂಡ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಳಿದ್ದು, ಇಂದೂ ಕೂಡ ಮುಂದುವರೆಯುವ ಸಾಧ್ಯತೆಗಳಿವೆ.
ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬೀದಿಗಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ರು. ಮಂಗಳವಾರ ಸ್ವತಃ ಸಚಿವ ತನ್ವೀರ್ ಸೇಠ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಜೊತೆ ಮಾತಾನಾಡಿ ಸಂಜೆ 6 ಗಂಟೆಯೊಳಗೆ ಬೇಡಿಕೆ ಈಡೆರಿಸುತ್ತೇವೆ ಅಂತಾ ಭರವಸೆ ನೀಡಿದ್ರು.
ಆದ್ರೆ ಭರವಸೆ ನೀಡಿ ತೆರಳಿದ ಸಚಿವ ತನ್ವೀರ್ ಸೇಠ್ ಆ ಕಡೆ ತಲೆ ಹಾಕಲೇ ಇಲ್ಲ. ಹೀಗಾಗಿ ಇದೀಗ ಪ್ರತಿಭಟನಾಕಾರರು ಸುಳ್ಳು ಭರವಸೆ ನೀಡಿ ಓಡುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 15 ಸಾವಿರ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ 2100 ರೂ. ಸಂಬಳ ನೀಡುತ್ತಿರುವ ಸರ್ಕಾರ, ಕಳೆದ ಎರಡು ತಿಂಗಳಿನಿಂದ ಸಂಬಳವೂ ಪಾವತಿ ಮಾಡಿಲ್ಲ. ಹೀಗಾಗಿ ಲಿಖಿತ ಭರವಸೆ ಕೊಟ್ಟರೆ ಮಾತ್ರ ಧರಣಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ
ಈ ಹಿಂದೆ ಹಲವು ಬಾರಿ ಕನಿಷ್ಠ ವೇತನ, ಪಿಎಫ್, ಇಎಸ್ಐ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗೆ ಇಳಿದ್ರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೀಗಾಗಿ ಬಿಸಿಯೂಟ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೇ ಅಹೋರತ್ರಿ ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇಂದು ರಾಜ್ಯದ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ.