– ಕಂಟೈನರ್ ಹಿಂಭಾಗದಲ್ಲಿ ಬರ್ತಿದ್ದ ಓಲಾ ಕ್ಯಾಬ್ ಚಾಲಕನ ಸ್ಥಿತಿ ಗಂಭೀರ
ಬೆಂಗಳೂರು: ನಗರದಿಂದ ದೆಹಲಿಗೆ ಸಾಗಿಸುತ್ತಿದ್ದ ಮೆಟ್ರೋ ಬೋಗಿಗೆ ವಿದ್ಯುತ್ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಕೋನಪ್ಪನ ಅಗ್ರಹಾರ ಜಂಕ್ಷನ್ ಬಳಿ ಸಂಭವಿಸಿದೆ.
ಇಂದು ಬೆಳಗಿನ ಜಾವ 4ರ ಸಮಯದಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶವಾಗುತ್ತಿದ್ದಂತೆ ಕಂಟೈನರ್ ಚಾಲಕ ತಕ್ಷಣ ಕೆಳಗಿಳಿದು ಬಚಾವ್ ಆಗಿದ್ದಾರೆ. ಆದರೆ ಕಂಟೈನರ್ ಹಿಂಭಾಗದಲ್ಲಿ ಬರುತ್ತಿದ್ದ ಓಲಾ ಕ್ಯಾಬ್ ಬೆಂಕಿ ತಾಕಿ ಕ್ಯಾಬ್ ನಲ್ಲಿದ್ದ ಚಾಲಕನಿಗೆ ವಿದ್ಯುತ್ ಸ್ಪರ್ಶ ಉಂಟಾಗಿ ಬಾಯಲ್ಲಿ ರಕ್ತ ಬಂದು ಕಾರಿನಲ್ಲಿ ಕುಸಿದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಅಗ್ನಿಶಾಮಕದಳವರಿಗೆ ಮಾಹಿತಿ ನೀಡಿದ್ದು, ಕಾರ್ಯ ಪ್ರವೃತ್ತರಾದ ಅಗ್ನಿಶಾಮಕದಳದವರು ಬೆಂಕಿ ನಂದಿಸಿ ವಿದ್ಯುತ್ ಕಡಿತಗೊಳಿಸಿ ಚಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ತಕ್ಷಣಕ್ಕೆ ಕ್ಯಾಬ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದರೂ ಶೇಕಡ 60ರಷ್ಟು ಸುಟ್ಟ ಗಾಯಗಳಾಗಿ ಪರಿಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗುತ್ತಿದೆ.
ಮೆಟ್ರೋ ಬೋಗಿಯನ್ನು ಬೆಂಗಳೂರಿನ ಬೆಮೆಲ್ ನಿಂದ ದೆಹಲಿಗೆ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ.