-ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ
-ಮನನೊಂದು ಯುವಕ ನೇಣಿಗೆ ಶರಣು
-ಮದುವೆ ಕನಸು ಕಂಡಿದ್ದ ಜೋಡಿ
ಹೈದರಾಬಾದ್: ನಾಲ್ಕು ವರ್ಷದ ಪ್ರೀತಿ ದುರಂತ ಅಂತ್ಯ ಕಂಡಿದೆ. ಕೆಲವೇ ದಿನಗಳಲ್ಲಿ ಮದುವೆಯಾಗುತ್ತಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಮಕಲಾ ಸಿರಿಶಾ (20) ಮತ್ತು ವೆಂಕಟೇಶ್ (22) ಮೃತ ಪ್ರೇಮಿಗಳು. ಇಬ್ಬರೂ ಯಲಮಂಚಿಲಿಯ ನಿವಾಸಿಗಳಾಗಿದ್ದು, ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ಮೊದಲು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಏನಿದು ಪ್ರಕರಣ:
ಗೋಪಾಲಪಟ್ಟಣಂ ಮತ್ತು ಕಾಂಚರಾಪಲೆಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮಕಲಾ ಸಿರಿಶಾ (20) ಯಲಮಂಚಿಲಿ ರಾಮ್ನಗರದಲ್ಲಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ಈಕೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅದೇ ಪ್ರದೇಶದ ವೆಂಕಟೇಶ್ನನ್ನು ಪ್ರೀತಿಸುತ್ತಿದ್ದಳು. ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿದ್ದಾಳೆ. ನಂತರ ಆತನ ಜೊತೆಯೇ ಮದುವೆ ಮಾಡುವುದಾಗಿ ಪೋಷಕರು ಹೇಳಿದ್ದು, ಆ ಬಳಿಕ ಗೋಪಾಲಪಟ್ಟಣಂಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದಾರೆ. ಅಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು.
ಯುವತಿ ವೆಂಕಟೇಶ್ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಮಂಗಳವಾರ ಸಂಜೆ ರೆಸ್ಟೋರೆಂಟ್ ಕೌಂಟರ್ ನಲ್ಲಿ ಕುಳಿತಿದ್ದ ವೇಳೆ ವೆಂಕಟೇಶ್, ಸಿರಿಶಾಗೆ ಫೋನ್ ಮಾಡಿದ್ದಾನೆ. ಸ್ವಲ್ಪ ಹೊತ್ತು ಮಾತಾಡಿದ ನಂತರ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ನಂತರ ಸಿರಿಶಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿ, ರೆಸ್ಟೋರೆಂಟ್ನಿಂದ ಮನೆಗೆ ತೆರಳಿದ್ದಳು. ಕೂಡಲೇ ಸಿರಿಶಾ ಸಹೋದರಿಗೆ ಫೋನ್ ಮಾಡಿದ್ದ ವೆಂಕಟೇಶ್ ವಿಚಾರವನ್ನು ಸಿರಿಶಾ ಸಹೋದರಿಗೆ ತಿಳಿಸಿದ್ದ. ಫೋನ್ ಕರೆ ಮಾಹಿತಿಯಂತೆ ಮನೆಗೆ ತೆರಳಿದ್ದ ಸಹೋದರಿಗೆ ಸಿರಿಶಾ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿತ್ತು.
ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿಯ ನೆರವಿನಿಂದ ಸಿರಿಶಾಳನ್ನು ಗೋಪಾಲಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಆದರೆ ಈಗಾಗಲೇ ಯುವತಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ ತಿಳಿದ ಗೋಪಾಲಪಟ್ಟಣಂ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಾಯಿ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದೆಡೆ, ಗೆಳತಿ ಮೃತಪಟ್ಟಿದ್ದಾಳೆ ಎಂದು ತಿಳಿದು ವೆಂಕಟೇಶ್ ತೀವ್ರ ಮನನೊಂದುಕೊಂಡಿದ್ದನು. ವೆಂಕಟೇಶ್ ಕಾಂಚರಪಲೆಂ ಪೊಲೀಸ್ ಠಾಣೆ ಬಳಿಯ ಬರ್ಮಾ ಕ್ಯಾಂಪ್ ಬಳಿ ವಾಸಿಸುತ್ತಿದ್ದನು. ಈತ ಬುಧವಾರ ಬೆಳಿಗ್ಗೆ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಕಾಂಚರಾಪಲೆಂ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.