ನವದೆಹಲಿ: ಮೈಸೂರಿನಲ್ಲಿ ಸುಮಲತಾ ಗೆಲ್ಲಿಸಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ಮಾತಿಗೆ ಬಿಜೆಪಿ ಸಂಸದರು ಭಯ ಬಿದ್ದರಾ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ.
ಸಿಎಂ ಪುತ್ರನನ್ನ ಸೋಲಿಸಿದ್ದ ಕಾರಣಕ್ಕೆ ಸುಮಲತಾಗೆ ವಿಶೇಷ ಗೌರವ ಸಿಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗೆ ಮೋದಿ ಕರೆದಿದ್ದ ಡಿನ್ನರ್ನಲ್ಲೂ ಸುಮಲತಾ ಹವಾ ಜೋರಾಗಿತ್ತು. ಈಗ ಮಂತ್ರಿಗಳ ಕಚೇರಿಗಳಿಗೂ ಸುಮಲತಾ ಅವರಿಗೆ ಸುಲಭವಾಗಿಯೇ ಎಂಟ್ರಿ ಸಿಗುತ್ತದೆ. ಬಿಜೆಪಿ ಸಂಸದರು ಅಭಿವೃದ್ಧಿ ಕೆಲಸಗಳ ಹೆಸರಿನಲ್ಲಿ ಸುಮಲತಾಗೆ ಬೆಂಬಲ ಕೊಡುತ್ತಿದ್ದಾರೆ. ಈ ಮೂಲಕ ಸುಮಲತಾ ಅವರನ್ನು ಬಿಜೆಪಿಯತ್ತ ಸೆಳೆಯಲು ದೆಹಲಿಯಲ್ಲಿ ಮೆಗಾ ಪ್ಲಾನ್ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಸಂಸದೆ ಸುಮಲತಾ ಅವರು ಮಂಡ್ಯಕ್ಕೆ 2 ಟಿಎಂಸಿ ನೀರಿಗಾಗಿ ಡಿವಿ ಸದಾನಂದ ಗೌಡರಿಗೆ ಮನವಿ ಮಾಡಿದ್ದರು. ಸುಮಲತಾ ಅವರ ಒಂದೇ ಪತ್ರಕ್ಕೆ ಡಿ.ವಿ ಸದಾನಂದಗೌಡರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಇದನ್ನೇ ರಾಜ್ಯ ಬಿಜೆಪಿ ಸಂಸದರು ದಾಳವಾಗಿ ಬಳಸಿಕೊಳ್ತಿದ್ದಾರಾ ಅನ್ನೋ ಅನುಮಾನ ಮಾಡಿದೆ.
ಇತ್ತೀಚೆಗೆ ಸುಮಲತಾ ಅವರು ಬಿಜೆಪಿ ಸಂಸದರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಮಂಡ್ಯದ ಕೆಲಸಗಳಿಗಾಗಿ ಬಿಜೆಪಿ ಸಂಸದರ ಜೊತೆ ಸುಮಲತಾ ಅಂಬರೀಶ್ ಇದ್ದಾರಾ ಅಥವಾ ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ. ಒಟ್ಟಿನಲ್ಲಿ ಸುಮಲತಾ ಅಂಬರೀಶ್ ಅವರ ಜಾಣ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿದೆ.