-ಅಯೋಧ್ಯೆಯಲ್ಲಿ ರಾಮ ಮಂದಿರವೇ ಆಗ್ಬೇಕು: ಉಮಾ ಭಾರತಿ
ನವದೆಹಲಿ: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆಗಬೇಕೆ ಹೊರತು ಬೇರೆ ಧಾರ್ಮಿಕ ಕೇಂದ್ರಗಳು ಆಗಬಾರದು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ. ಇದರ ಜೊತೆಗೆ ನಾವು ರಾಮನ ಭಕ್ತರೂ ಹೌದು. ವೆಟಿಕನ್ ಸಿಟಿಯಲ್ಲಿ ಮಸೀದಿ ನಿರ್ಮಾಣ ಆಗಲ್ಲ. ಮಕ್ಕಾ-ಮದೀನಾದಲ್ಲಿ ದೇವಾಲಯ ನಿರ್ಮಿಸಲು ಅವಕಾಶವಿಲ್ಲ. ಅದರಂತೆಯೇ ರಾಮಜನ್ಮಭೂಮಿಯಲ್ಲಿ ಬೇರೆ ಧಾರ್ಮಿಕ ಕೇಂದ್ರ ನಿರ್ಮಿಸಲು ಸಾಧ್ಯವಿಲ್ಲ ಎಂದು ಉಮಾ ಭಾರತಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೊಂದು ಭೂಮಿ ವಿವಾದವಾಗಿದ್ದು, ಎರಡೂ ಪಾರ್ಟಿಗಳು ಸಂಧಾನ ಮಾಡಿಕೊಂಡರೆ ನ್ಯಾಯಾಲಯ ಸಮ್ಮತಿ ಸೂಚಿಸುತ್ತದೆ. ಅದರಂತೆ ನ್ಯಾಯಾಲಯ ಸಹ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಲಿದ್ದು, ಎಲ್ಲರೂ ಸೇರಿ ರಾಮಮಂದಿರವನ್ನು ನಿರ್ಮಾಣ ಮಾಡೋಣ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ನಾವು ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಲ್ಲ. ಈ ಮೊದಲು ನಡೆದ ಸಂಧಾನಗಳು ಫಲಪ್ರದವಾಗಿರಲಿಲ್ಲ. ಭಗವಾನ್ ರಾಮನ ಮಂದಿರ ನಿರ್ಮಾಣಕ್ಕೆ ವಿಳಂಬ ಮಾಡಬಾರದು ಎಂಬುದು ಭಕ್ತರ ವಾದವಾಗಿದೆ ಎಂದರು.
ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ಬಾಬರಿ ಮಸೀದಿ ಆ್ಯಕ್ಷನ್ ಕಮೀಟಿಯ ಸಂಯೋಜಕ ಜಫರಾಯಬ್ ಜಿಲಾನಿ, ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ವಾದ ನಮ್ಮದಾಗಿತ್ತು. ನಮ್ಮ ಅಭಿಪ್ರಾಯಗಳನ್ನು ನಾವು ಸಂಧಾನದ ಕಮಿಟಿ ಮುಂದೆಯೇ ಹೇಳುತ್ತೇವೆ. ಹಾಗಾಗಿ ಹೆಚ್ಚು ಮಾತನಾಡಲಾರೆ ಎಂದು ತಿಳಿಸಿದ್ದಾರೆ.
ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ ಮಾತನಾಡಿ, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇವೆ. ನಾವು ಸಕಾರಾತ್ಮಕ ಯೋಚನೆಗಳನ್ನು ಹೊಂದಿದ್ದು, ನ್ಯಾಯಾಲಯ ನೇಮಿಸಿದ ಕಮಿಟಿಯಲ್ಲಿ ರವಿಶಂಕರ್ ಗೂರೂಜಿಗಳ ಹೆಸರನ್ನು ನಿರ್ದೇಶನ ಮಾಡಿದ್ದಕ್ಕೆ ಖುಷಿಯಾಗಿದೆ. ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದರು.
ನಿರ್ಮೋಹಿ ಅಖಾರದ ಮಹಾಂತ ಸೀತಾರಾಮ ದಾಸ್ ಪ್ರತಿಕ್ರಿಯಿಸಿ, ಈ ನಿರ್ಣಯದ ಮೇಲೆ ಯಾವುದೇ ರಾಜಕೀಯ ಪ್ರಭಾವ ಬೀರದರಲಿ ಎಂದು ನ್ಯಾಯಾಲಯ ನಿರ್ದೇಶನ ಮಾಡಿರುವ ಸಮಿತಿಯಲ್ಲಿ ಸಾಂವಿಧಾನಿಕ ಸದಸ್ಯರ ನೇಮಕವಾಗಲಿ ಎಂಬ ಆಶಯ ನಮ್ಮದಿತ್ತು. ಆದರೆ ನ್ಯಾಯಾಲಯ ಶ್ರೀ ರವಿಶಂಕರ್ ಗೂರೂಜಿ ಅವರನ್ನು ನೇಮಿಸಿದ್ದರಿಂದ ಕೆಲವು ತೊಡಕಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv