ನಾನು, ಪ್ರಜ್ವಲ್ ಹಾಸನದ ಋಣ ತೀರಿಸುತ್ತೇವೆ: ಸೂರಜ್ ರೇವಣ್ಣ

Public TV
2 Min Read
Prajwal Revanna Suraj Revanna

– ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ

ಹಾಸನ: ಸೂರ್ಯ ಹುಟ್ಟುವುದು ಒಂದೇ ಸಲ ಅಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ. ನಿಮ್ಮ ಪ್ರಜ್ವಲ್ ಅಣ್ಣ, ಸೂರಜ್ ಅಣ್ಣನೂ ಅಷ್ಟೇ. ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Suraj Revanna) ಹೇಳಿದ್ದಾರೆ.

ತಮ್ಮ ಹುಟ್ಟುಹಬ್ಬದ ಅಂಗವಾಗಿ ಚನ್ನರಾಯಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳು, ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡುತ್ತಿದ್ದಾರೆ ಎಂದು ನೋಡುತ್ತಿದ್ದೇವೆ. ಯಾವುದೂ ಶಾಶ್ವತವಲ್ಲ. ಯಾವ ಸರ್ಕಾರವೂ ಶಾಶ್ವತ ಅಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂಥವರೋ ಏನೇನೋ ಆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತದೆ. ಈ ದ್ವೇಷದ ರಾಜಕಾರಣ ಉಳಿಯಲ್ಲ ಎಂದರು. ಇದನ್ನೂ ಓದಿ: ಧರ್ಮಸ್ಥಳದ ಸ್ನಾನಘಟ್ಟ ಅಪವಿತ್ರಕ್ಕೆ ಹುನ್ನಾರ – ನೇತ್ರಾವತಿಯ ಉಪನದಿಯಲ್ಲಿ 11 ಗೋಣಿ ಗೋಮಾಂಸ ಪತ್ತೆ

ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಎಂದು ನಿಮಗೆ 135 ಸೀಟ್ ಕೊಟ್ಟಿದ್ದು. ಅದನ್ನು ಬಿಟ್ಟು ದಿನ ಬೆಳಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಗಿಸೋದು ಬರೀ ಇದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್‌, ತರೀಕೆರೆಯಲ್ಲಿ ವಿಚಾರಣೆ!

ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು, ಯಾವ ರೈತರಿಗೆ ಒಳ್ಳೆಯದಾಗಿದೆ ಹೇಳಿ? ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಆವರಿಸಿಕೊಂಡಿದೆ. ಮತ್ತೆ ನಿಮ್ಮ ಸೂರಜ್ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕೆಲವರು ಕುಣಿಯುತ್ತಿದ್ದಾರೆ. ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮದ್ಯ, ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ – ಕಾನ್‌ಸ್ಟೇಬಲ್‌ಗಳು ಅರೆಸ್ಟ್

ನಿನ್ನೆ ಮೊನ್ನೆ ಪೆನ್‌ಡ್ರೈವ್ (Pendrive) ಹಂಚಿ ನಾನು ಎಂಎಲ್‌ಸಿ ಆಗಿಲ್ಲ. ನಿಮ್ಮ ತಾತನ ತರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ. ದೇವೇಗೌಡರು, ರೇವಣ್ಣನ ಕುಟುಂಬ ಮುಗಿಸುತ್ತಾರಂತೆ. ಇದೇ 25 ವರ್ಷದ ಹಿಂದೆ, ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆಯೋ ಅವರ ತಾತ, ನಮ್ಮ ಅಜ್ಜಿ, ತಾಯಿ ಮೇಲೆ ಆಸಿಡ್ ಎರಚಿಸಿದ್ದನ್ನ ಯಾರೂ ಮರೆಯಬಾರದು. ಇದು ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತದೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತ ಅವರ ತಮ್ಮನ ಮಕ್ಕಳಿಂದ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಆಸಿಡ್ ದಾಳಿ ಮಾಡಿಸಿದ್ದರು. ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತೂ ಕೂಡ ಸಂಕಷ್ಟ ಇತ್ತು. ಅಂದೂ ಕಾಂಗ್ರೆಸ್ ಸರ್ಕಾರ ಇತ್ತು. ಈಗ 135 ಸೀಟ್, ಆಗ 130 ಸೀಟ್ ಗೆದ್ದಿದ್ದರು. ಇವರಿಗೆ ದೇವೇಗೌಡರು, ರೇವಣ್ಣ ಕುಟುಂಬ ಮುಗಿಸಬೇಕು ಎಂಬುದು ಒಂದೇ ಉದ್ದೇಶ. 25 ವರ್ಷದ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು. ನಂತರ ಏನಾಯ್ತು ಸ್ವಾಮಿ, ಇದು ಅದೇ ರೀತಿಯ ಒಂದು ಅನುಭವ ಎಂದು ಸಂಸದ ಶ್ರೇಯಸ್ ಪಟೇಲ್ (Shreyas Patel) ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ

Share This Article