ವಿಜಯಪುರ: ಆಲಮಟ್ಟಿ ಡ್ಯಾಂ ನೀರನ್ನು ಎಂ.ಬಿ.ಪಾಟೀಲ್ ಖಾಲಿ ಮಾಡಿದ್ದಾರೆ ಎಂಬ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ಹೇಳಿಕೆಗೆ ಎಂಬಿಪಿ ಫುಲ್ ಗರಂ ಆಗಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಎಂಬಿಪಿ ಆಲಮಟ್ಟಿ ಡ್ಯಾಂ ನೀರು ಖಾಲಿ ಮಾಡಿದರು ಎಂಬ ಹೇಳಿಕೆ ಸರಿಯಿಲ್ಲ. ಸಚಿವ ಶಿವಾನಂದ ಪಾಟೀಲರಿಗೆ ಹೊಟ್ಟೆ ಉರಿ ಸ್ವಲ್ಪ ಜಾಸ್ತಿ ಇದೆ. ಇಂತಹ ಅಸೂಯೆ ಪಡುವ ಜನರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಮನಕ್ಕೆ ತಂದಿದ್ದೇನೆ ಎಂದು ತಿರುಗೇಟು ನೀಡಿದರು.
ನೀರಾವರಿ ಸಮಿತಿ ಅಧ್ಯಕ್ಷರು ಎಸ್.ಆರ್ ಪಾಟೀಲರಾಗಿದ್ದರು. ಆ ಸಮಿತಿ ಏನು ನಿರ್ಧಾರ ಮಾಡಿತ್ತೋ ಅದೇ ರೀತಿ ನೀರು ಬಿಟ್ಟಿದ್ದರು. ನಾನು ಗೃಹ ಸಚಿವರಾಗಿದ್ದರೂ ನನಗೂ ಅದಕ್ಕೂ ಸಂಬಂಧವೇ ಇಲ್ಲ. ಆದರೆ ಪಾಟೀಲ್ ಅವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮದೇ ಪಕ್ಷದ ಸಚಿವರಾಗಿ ಏನು ತಿಳಿದುಕೊಳ್ಳದೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಮಾಡಿರುವ ಕೆಲಸದಿಂದ ಅವರ ಕ್ಷೇತ್ರದ ಅನೇಕ ಕೆರೆಗಳು ತುಂಬುತ್ತಿವೆ. ಇದರಿಂದ ಅವರು ಸಂತೋಷ ಪಡಬೇಕು. ತಮ್ಮ ಕುಟುಂಬದ ಜೊತೆ ಹೋಗಿ ಶಿವಾನಂದ ಪಾಟೀಲ್ ಕೆರೆಗೆ ಪೂಜೆ ಮಾಡಿದ್ದಾರೆ. ಎಂಬಿಪಿ ನೀರಾವರಿ ಕಾಮಗಾರಿ ಮಾಡಿದ್ದಾರೆಂದು ಗೌರವ ಪಡಬೇಕು. ಕೊಳಕು ಮಾತನಾಡುವುದು, ಅಸೂಯೆ ಪಡುವುದು ಅವರ ಸ್ವಾಭಾವವಾಗಿದೆ ಎಂದು ಎಂಬಿಪಿ ಗರಂ ಆಗಿ ತಿರುಗೇಟು ನೀಡಿದರು.