ಬೆಂಗಳೂರು: ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮಂಗಳವಾರ ರಾತ್ರಿ 9 ಗಂಟೆಯಿಂದ ತಡ ರಾತ್ರಿವರೆಗೂ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ಹಲವೆಡೆ ರಸ್ತೆ ಗುಂಡಿ ವೀಕ್ಷಣೆ ಮಾಡಿದ್ದಾರೆ.
ಲಾಟರಿ ಮೂಲಕ ವೀಕ್ಷಣೆ ವಲಯವನ್ನು ಆಯ್ಕೆ ಮಾಡಿಕೊಂಡು ಬಿಬಿಎಂಪಿ ಕೇಂದ್ರ ಕಚೇರಿಯಿಂದ ದ್ವಿಚಕ್ರ ವಾಹನವೇರಿ ಗುಂಡಿಗಳ ಪರಿಶೀಲನೆಗೆ ತೆರಳಿದರು. ಆರಂಭದಲ್ಲಿ ಪಾಲಿಕೆ ಕಚೇರಿ ಬಳಿಯೇ ಸಂಪತ್ ರಾಜ್ ಅವರಿಗೆ ಗುಂಡಿಗಳ ದರ್ಶನವಾಯಿತು. ಎಂಜಿ ರೋಡ್ ಮತ್ತು ಟೆಂಡರ್ ಶ್ಯೂರ್ ರಸ್ತೆ ಹದಗೆಟ್ಟ ಹಿನ್ನೆಲೆ, ಈ ಎರಡು ಕಾಮಗಾರಿಯ ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲು ಮೇಯರ್ ಸೂಚನೆ ನೀಡಿದರು. ಇತ್ತ ಬೆಂಗಳೂರು ಕ್ಲಬ್ ಮತ್ತು ಸುಬ್ಬಯ್ಯ ವೃತ್ತದ ಹತ್ತಿರ ರಸ್ತೆ ಕಾಮಗಾರಿಯ ಗುತ್ತಿಗೆದಾರರಿಗೆ 1 ಲಕ್ಷ ರೂ. ದಂಡ ವಿಧಿಸುವಂತೆ ಸೂಚಿಸಿದರು.
ಪರಿಶೀಲನೆಯ ಬಳಿಕ ಮಾತನಾಡಿದ ಮೇಯರ್ ಸಂಪತ್ ರಾಜ್, ಮಾಧ್ಯಮಗಳ ವರದಿ ಆಧರಿಸಿ ರಸ್ತೆಗಳಲ್ಲಿನ ಗುಂಡಿಗಳ ವೀಕ್ಷಣೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿದ್ದು ಸರಿಯಾಗಿ ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ದಂಡ ಹಾಕಲಾಗಿದೆ ಎಂದು ತಿಳಿಸಿದರು.
ರಸ್ತೆ ಗುಂಡಿಗಳ ವೀಕ್ಷಣೆಯ ವೇಳೆ ದಾರಿ ಮಧ್ಯೆ ಶಾಸಕ ಹ್ಯಾರಿಸ್ ಪುತ್ರ ಮೊಹ್ಮದ್ ನಲಪಾಡ್ ಸಿಕ್ಕಿದ್ದು, ಮೇಯರ್ ಕೈ ಕುಲುಕಿದ್ರು.