ಬೆಂಗಳೂರು: ಬೆಳ್ಳಂಬೆಳ್ಳಗ್ಗೆ ಚಿಕ್ಕಪೇಟೆ ಮತ್ತು ಗಾಂಧಿನಗರ ವಾರ್ಡ್ ನಲ್ಲಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಮಸ್ಯೆ ಹೇಳಲು ಬಂದ ಸಾರ್ವಜನಿಕರ ವಿರುದ್ಧ ಮೇಯರ್ ಗರಂ ಆದ ಘಟನೆ ನಡೆದಿದೆ.
ಸಾರ್ವಜನಿಕರು ಮ್ಯಾನ್ ಹೋಲ್ ವಿಚಾರಕ್ಕೆ ಗಾಂಧಿನಗರ ವಾರ್ಡ್ ದೂರು ನೀಡಿದರು. ದೂರಿನಲ್ಲಿ, ಮ್ಯಾನ್ ಹೋಲ್ ಸರಿಯಿಲ್ಲ. ಹಾಗೇ ಹೀಗೆ ಎಂದು ಸಾರ್ವಜನಿಕರು ಕೂಗಾಡಿದರು. ಸಾರ್ವಜನಿಕರ ಏರುಧ್ವನಿಯಲ್ಲಿ ಸಮಸ್ಯೆ ಪ್ರಶ್ನಿಸಿದ್ದಕ್ಕೆ, ನಮಗೆ ಕೆಲಸ ಮಾಡೋದು ಗೊತ್ತಿದೆ. ಜಾಸ್ತಿ ಎಕ್ಸಪ್ಲೈನ್ ಮಾಡಬೇಡಿ. ನಾವು ಕೆಲಸ ಮಾಡೋಕೆ ಬಂದಿರೋದು. ಹೀಗೆ ಮಾತಾಡ್ತಾ ಇದ್ರೆ ನೀವೇ ಮಾಡ್ಕೋಳಿ ನಾವು ಹೋಗ್ತೀವಿ ಎಂದು ಮೇಯರ್ ಕಿಡಿಕಾರಿದರು. ಮೇಯರ್ ಮಾತಿಗೆ ಸಾರ್ವಜನಿಕರು ಸುಮ್ಮನಾದರು.
ತಪಾಸಣೆ ವೇಳೆ ಮೇಯರ್ ಗೆ ಸಮಸ್ಯೆಗಳ ಸುರಿಮಳೆಗಳೇ ಬಂದಿವೆ. ಸಾರ್ವಜನಿಕರ ಸಮಸ್ಯೆಗಳ ದೂರಿನ ಹಿನ್ನೆಲೆ ಜಲಮಂಡಳಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಬರೀ ನೀರಿನ ಸಮಸ್ಯೆನೇ ಮನೆಗೆ ನೀರು ನುಗ್ಗುತ್ತೆ. ರೋಡಲ್ಲಿ ನೀರು ನಿಲ್ಲುತ್ತೆ ಅಂತ. ನಿಮ್ಮಿಂದ ನಾವು ಬೈಯಿಸಿಕೊಳ್ಳುವಂತಾಯ್ತು. ಕೆಲಸ ಮಾಡೋಕೆ ಏನ್ರಿ ಅಂತ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೆ ಜಲಮಂಡಳಿಯಿಂದ ಸರಿಯಾಗಿ ಕೆಲಸ ಮಾಡಿ ಅಂತ ಅಧಿಕಾರಿಗೆ ಸೂಚನೆ ನೀಡಿದರು.
ಸುಭಾಷಿತ ಬರೆದು ಮೇಯರ್ಗೆ ಟಾಂಗ್:
ಮೇಯರ್ ಆಗಮನಕ್ಕೆ ಸುಭಾಷಿತ ಬರೆದು ಬಿವಿಕೆ ಅಯ್ಯಂಗಾರ್ ರಸ್ತೆಯ ಸಾರ್ವಜನಿಕರು ಬೋರ್ಡ್ ನೇತು ಹಾಕಿದರು. ಈ ಮೂಲಕ ಮೇಯರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮೇಯರ್ ಬಂದರೆ ಬೀದಿಗಳು ಸ್ವಚ್ಛವಾಗುತ್ತೆ, ಮಳೆ ಬಂದರೆ ಊರು ಸ್ವಚ್ಛವಾಗುತ್ತೆ ಎಂದು ಸುಭಾಷಿತ ಬರೆಯುವ ಮೂಲಕ ಮೇಯರ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ತಪಾಸಣೆಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದಿದೆ. ಇಲ್ಲೇ ಹುಟ್ಟಿ ಬೆಳೆದಿರುವ ಸಂಸದ ಮೋಹನ್ ಅವರ ಸಲಹೆ ಪಡೆದಿದ್ದೇವೆ. ಯಾವ ರೀತಿ ಕಾಮಗಾರಿ ನಡೆಸಬೇಕು. ಕಸ ವಿಲೇವಾರಿ ಸೇರಿದಂತೆ ಹಲವು ಕೆಲಸಗಳ ಬಗ್ಗೆ ಸಲಹೆ ನೀಡಿದ್ದಾರೆ. 10 ರಿಂದ 15 ದಿನಗಳಲ್ಲಿ ಮೀಟಿಂಗ್ ಮಾಡಿ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಇದೇ ವೇಳೆ ಮೇಯರ್ ಬಂದ್ರೆ ರಸ್ತೆ ಸ್ವಚ್ಛ ಆಗುತ್ತೆ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಜನ ಎಷ್ಟು ಬೈತರೊ ಅಷ್ಟು ನಾವು ಕಲೀತಿವಿ. ಜನ ಹೇಳಿರೋದನ್ನು ಮನಸಲ್ಲಿ ಇಟ್ಟಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.