– ರಾಮಲಿಂಗಾರೆಡ್ಡಿ ಪರ ಬ್ಯಾಟ್ ಬೀಸಿದ ಗಂಗಾಂಬಿಕೆ
ಬೆಂಗಳೂರು: ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೇ ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮೇಯರ್ ಗಂಗಾಬಿಕೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಮೇಯರ್, ನಾನು ರಾಮಲಿಂಗಾರೆಡ್ಡಿ ಅವರ ಶಿಷ್ಯೆ. ಸಚಿವ ಸ್ಥಾನ ಹಾಗೂ ಜವಾಬ್ದಾರಿ ನೀಡುವಲ್ಲಿ ಹೈಕಮಾಂಡ್ ಅವರನ್ನು ಕಡೆಗಣಿಸಿದ್ದು ಬೇಸರ ತಂದಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ರಾಮಲಿಂಗಾರೆಡ್ಡಿ. ಬೆಂಗಳೂರಿನ ಕಾರ್ಯಕರ್ತರು ರಾಮಲಿಂಗಾರೆಡ್ಡಿ ಅವರ ಬೆಂಬಲಿಗರು. ಇದನ್ನು ಪಕ್ಷದ ನಾಯಕರು ಗಮನಿಸಬೇಕಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!
ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು ಹಾಗೂ ನಾನು ರಾಮಲಿಂಗಾ ರೆಡ್ಡಿ ಅವರ ಬೆಂಬಲಿಗರು. ಒಂದು ವೇಳೆ ಅವರಿಗೆ ಸಚಿವ ಸ್ಥಾನ ನೀಡದೇ ಇದ್ದರೆ ನಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದ ಅವರು, ಈಗಾಗಲೇ ವೇಣುಗೋಪಾಲ್ ಜೊತೆ ಚರ್ಚೆ ನಡೆಸಲಾಗಿದೆ. ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದರು. ಇದನ್ನು ಓದಿ: ಫೈನಲ್ ಆಯ್ತು ಖಾತೆ ಹಂಚಿಕೆ – ಕೊನೆಗೂ ಗೆದ್ದ ಸಿದ್ದರಾಮಯ್ಯ: ಯಾರಿಗೆ ಯಾವ ಖಾತೆ?
ಒಂದು ಕಡೆ ರಾಮಲಿಂಗಾರೆಡ್ಡಿ ಪರ ಮೇಯರ್ ಗಂಗಾಂಬಿಕೆ ಬ್ಯಾಟ್ ಬೀಸಿದರೆ, ಮತ್ತೊಂದು ಕಡೆ ಈಗಾಗಲೇ ನೇಮಿಸಿರುವ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಪಕ್ಷದಲ್ಲಿಯೇ ಜಟಾಪಟಿ ನಡೆದಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಬಳಿ ಇರುವ ಎರಡು ಖಾತೆಗಳ ವಿಚಾರಕ್ಕೆ ಸಿದ್ದರಾಮಯ್ಯ ಗರಂ ಆಗಿದ್ದಾರಂತೆ. ಇತ್ತ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಬಿ.ಸಿ.ಪಾಟೀಲ್, ನಾಗೇಂದ್ರ ಸೇರಿದಂತೆ ಕೆಲವು ನಾಯಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv