ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” (Mayamruga)ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು. ಸಿನಿಮಾಗಳಿಗೆ ಸೀಕ್ವೆಲ್ ಬರುವುದು ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್ ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ‘ಮಾಯಾಮೃಗ’ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ. ಇಷ್ಟೊಂದು ವರ್ಷಗಳ ಬಳಿಕ ಈ ಧಾರಾವಾಹಿಯ ಮುಂದುವರೆದ ಭಾಗ ತರುವುದು ಅಷ್ಟು ಸುಲಭವಲ್ಲ. ಸಾಕಷ್ಟು ಚಾಲೆಂಜ್ಗಳು ಇರುತ್ತದೆ ಎಂಬುದು ಸೀತಾರಾಮ್ (TN Seetharam) ಅವರ ಅಭಿಪ್ರಾಯ.
ಆಗಿಲೂ, ಈಗಲೂ ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ. ಸಿರಿಕನ್ನಡದ (Siri Kannada) ಸಂಜಯ್ ಶಿಂಧೆ ಅವರು ಈ ಪ್ರಪೋಸಲ್ ತಂದಾಗ ನನಗೆ ಭಯ ಆಯ್ತು. ‘ಮಾಯಾಮೃಗ’ಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ’ ಎಂದು ‘ಮಾಯಮೃಗ’ದ ಸೀಕ್ವೆಲ್ ಇರುವ ಚಾಲೆಂಜ್ಗಳ ಬಗ್ಗೆ ಸೀತಾರಾಮ್ ವಿವರಿಸಿದರು. ‘ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಈಗ ಅತೀ ವೇಗದಲ್ಲಿ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್ನಲ್ಲೇ ಎಲ್ಲಾ’ ಹೀಗೆ ಸಾಕಷ್ಟು ಬದಲಾಗಿದೆ ಎಂದು ಹೇಳುವ ಮೂಲಕ ಸೀತಾರಾಮ್ ಅವರು “ಮತ್ತೆ ಮಾಯಾಮೃಗ” ದ ಕಥೆ ಹೊಸ ಜಗತ್ತಿಗೆ ತಕ್ಕ ಹಾಗೆ ಇರುತ್ತದೆ ಎಂಬುದನ್ನು ತಿಳಿಸಿದರು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ. ಇದರ ಜತೆಗೆ ಯುವಪೀಳಿಗೆ ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ. ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಪ್ರಸಾರವಾಗಲಿದೆ ಎಂದರು ಟಿ.ಎನ್.ಸೀತಾರಾಮ್.
ಮೊದಲು ಮನೆಗೆ ಒಂದು ಟಿವಿ ಇರುತ್ತಿತ್ತು. ಈಗ ರೂಮಿಗೊಂದು ಟಿವಿ ಇರುತ್ತದೆ. ಅಜ್ಜ- ಅಜ್ಜಿ, ಅಪ್ಪ-ಅಮ್ಮ ಹಾಗೂ ಮಕ್ಕಳು ಬೇರೆಬೇರೆ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅವರನೆಲ್ಲಾ ನಮ್ಮ ಧಾರಾವಾಹಿ ನೋಡುವ ಹಾಗೆ ಮಾಡುವ ಸವಾಲು ನಮಗಿದೆ ಎಂದರು ಪಿ. ಶೇಷಾದ್ರಿ (P. Sheshadri). ನಾಗೇಂದ್ರ ಶಾ (Nagendra Shah) ಸಹ ಧಾರಾವಾಹಿಯ ಕುರಿತು ಮಾತನಾಡಿದ್ದರು.”ಮತ್ತೆ ಮಾಯಾಮೃಗ” ವನ್ನು ಪ್ರಸಾರ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ. ಧಾರಾವಾಹಿಯಲ್ಲಿ ನಟಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಮ್ ಸೂರಿ, ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಹಾಗೂ “ಮತ್ತೆ ಮಾಯಾಮೃಗ” ದಲ್ಲಿ ಅಭಿನಯಿಸುತ್ತಿರುವ ಯುವ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.