ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ಮೇ 7ಕ್ಕೆ ಪ್ರಕಟವಾಗಲಿದ್ದು, ಮೇ 8ಕ್ಕೆ ಆಯಾ ಶಾಲೆಗಳಲ್ಲಿ ಪ್ರಕಟಿಸಲಾಗುವುದೆಂದು ಫ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಸಚಿವರು, ಈ ಬಾರಿಯ ಪರೀಕ್ಷಾ ಸುಧಾರಣಾ ಕ್ರಮಗಳು ತೃಪ್ತಿ ತಂದಿದೆ. ರಾಜ್ಯಾದ್ಯಂತ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಮೇ 7ಕ್ಕೆ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಏಪ್ರಿಲ್ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಪ್ರಕಟ ಪಡಿಸಲಾಗುವುದೆಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.
ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಹಾಗೂ ಪೋಷಕರ ಅತಂಕವನ್ನು ದೂರ ಮಾಡಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ 33 ವಿಷಯಗಳಿಗೆ ಪರೀಕ್ಷೆ ನಡೆದಿದೆ. 8,54,424 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಪರೀಕ್ಷಾ ಮೌಲ್ಯ ಮಾಪನದಲ್ಲೂ ಸುಧಾರಣೆ ತಂದಿದ್ದೇವೆ. ಪರೀಕ್ಷಾ ಗೊಂದಲ ಹಾಗೂ ಆಕ್ರಮಗಳ ಘಟನೆಗಳಿಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಇದಕ್ಕೆ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಇದೇ ತಿಂಗಳ 16 ರಿಂದ 25ರ ವರೆಗೆ ಮೌಲ್ಯಮಾಪನ ನಡೆಯಲಿದೆ ಎಂದರು. ಪ್ರತಿ ಪ್ರಶ್ನೆ ಪತ್ರಿಕೆಯ ನೀಲಿ ಉತ್ತರ ಪ್ರತಿಗಳನ್ನು ಇಲಾಖೆಯ ವೈಬ್ಸೈಟ್ ನಲ್ಲಿ ಪ್ರಕಟಿಸುತ್ತೇವೆ. ನಂತರ ಈ ಕುರಿತು ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು ಎಂದರು.