– ಅಪ್ಪ, ಚಿಕ್ಕಪ್ಪ, ದೊಡ್ಡಪ ಮಾವ ಎಲ್ಲರೂ ಅವನೊಬ್ಬನೆ – ಧ್ವನಿ ಬದಲಿಸಿ ಮಾತನಾಡ್ತಿದ್ದ ಕಿಲಾಡಿ
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬರುತ್ತಿದ್ದ ಪೋಷಕರಿಗೆ ವಂಚಿಸುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಗುಜರಾತ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲೂ ದೋಖಾ ಮಾಡಿರುವ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ.
45 ವರ್ಷ ವಯಸ್ಸಿನ ಆರೋಪಿ (Accused) ನರೇಶ್ ಗೋಸ್ವಾಮಿ ತಾನೇ ಯುವಕನ ತಂದೆ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಅಂತ ಹೇಳಿಕೊಂಡು ಧ್ವನಿ ಬದಲಿಸಿ ಮಾತನಾಡುತ್ತಿದ್ದ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಿಸ್ಥಿತಿಗೆ ತಕ್ಕಂತೆ ಧ್ವನಿ ಬದಲಿಸಿ ಚಿಕ್ಕಪ್ಪನಿಗೆ ಆಕ್ಸಿಡೆಂಟ್ ಆಗಿದೆ, ಮಾವ ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳಿ, ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಕೆಲ ಪೋಷಕರ ಬಳಿ ವರದಕ್ಷಿಣೆ ರೂಪದಲ್ಲಿ ಮುಂಚಿತವಾಗಿಯೇ ಹಣ ಪಡೆದು ನಂತರ ಮೊಬೈಲ್ ಸ್ವಿಚ್ಆಫ್ ಮಾಡಿಕೊಳ್ಳುತ್ತಿದ್ದ. ಕೇವಲ ಕರ್ನಾಕದಲ್ಲಿ ಮಾತ್ರವಲ್ಲ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇದೇ ರೀತಿ ದೋಖಾ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು (Bengaluru Police) ತಿಳಿಸಿದ್ದಾರೆ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಪವನ್ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.
ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಫೋನ್ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್, ನನ್ನ ಚಿಕ್ಕಪ್ಪ ಟಿಕೆಟ್ ಬುಕ್ಕಿಂಗ್ ಮಾಡಬೇಕು, ಪರ್ಸ್ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ. ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.
ಹಣ ಪಡೆದ ವ್ಯಕ್ತಿ ಟಿಕೆಟ್ ಬುಕ್ಕಿಂಗ್ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿತ್ತು.