ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಿಬ್ಬರ ದುರಂತ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಗಡಿಯ ಜೆಎಮ್ಎಫ್ಸಿ ನ್ಯಾಯಾಲದಲ್ಲಿ ಇಂದು ವಿಚಾರಣೆ ನಡೆಯಿತು.
ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್ಎಫ್ಸಿ ನ್ಯಾಯಾಧೀಶ ಆನಂದ್ ಪ್ರಕರಣದ ವಿಚಾರಣೆ ನಡೆಸಿ ಜೂನ್ 27 ಕ್ಕೆ ಮುಂದೂಡಿದ್ರು. ಸಾಹಸ ನಿರ್ದೇಶಕ ರವಿವರ್ಮ, ಸಹ ನಿರ್ದೇಶಕ ಸಿದ್ದಾರ್ಥ್, ಹಾಗೂ ಯೂನಿಟ್ ಮ್ಯಾನೇಜರ್ ಭರತ್ ವಿಚಾರಣೆಗೆ ಹಾಜರಾಗಿದ್ರು.
ಕಳೆದ ನೆವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 24 ರಂದು ರಾಮನಗರ ಡಿಸಿಐಪಿ ಪೊಲೀಸರು 81 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಒಟ್ಟು 450 ಪುಟಗಳ ಚಾರ್ಜ್ ಶೀಟ್ನ್ನು ಮಾಗಡಿ ಜೆಎಮ್ಎಫ್ಸಿ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದಾರೆ.
ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್ ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ವಿಚಾರಣೆಗೆ ಗೈರಾಗಿದ್ದರು. ಗೈರಾಗಿದ್ದ ಆರೋಪಿತರ ಪರವಾಗಿ ವಾದ ಮಂಡಿಸಿದ ವಕೀಲರು ತಮ್ಮ ಕಕ್ಷಿದಾರರ ಅನಾರೋಗ್ಯದ ಸಮಸ್ಯೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ರು.