– ಚುನಾವಣೆ ಬಳಿಕ ಅಗತ್ಯ ಬಿದ್ದರೆ ಮೈತ್ರಿ
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಚುನಾವಣೆ ನಂತರ ಸ್ಥಳೀಯ ಸಂಸ್ಥೆಯಲ್ಲಿ ದೋಸ್ತಿಗೆ ದೇವೇಗೌಡರು ಚಿಂತನೆ ನಡೆಸಿದ್ದಾರೆ. ಈ ಮೂಲಕ ಪಕ್ಷ ಉಳಿಸೋದರ ಜೊತೆಗೆ ಬಿಜೆಪಿ ದೂರ ಇಡುವುದಕ್ಕೆ ಭರ್ಜರಿ ಯೋಜನೆ ಹಾಕಿದ್ದಾರಂತೆ. ಮೈಸೂರು ಭಾಗ ಸೇರಿ ಹಲವೆಡೆ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಫೈಟ್ ಮಾಡಲಿದ್ದು, ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಭದ್ರಕೋಟೆ ಒಡೆದು ಹೋಗುವ ಆತಂಕ ಎದುರಾಗಿದೆಯಂತೆ.
ಕಾರ್ಯಕರ್ತರು ಪಕ್ಷ ಬಿಟ್ಟು ಬಿಜೆಪಿ ಕಡೆ ಮುಖ ಮಾಡಬಹುದು ಎಂಬ ಭೀತಿಯಿಂದ ಚುನಾವಣೋತ್ತರ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್ಡಿಡಿ ಪ್ಲಾನ್ ಮಾಡಿದ್ದಾರೆ. ಪ್ರತ್ಯೇಕವಾಗಿಯೇ ಚುನಾವಣೆ ಎದರಿಸೋಣ. ಬಳಿಕ ಅಗತ್ಯ ಬಿದ್ದರೆ ಮೈತ್ರಿ ಮಾಡೋಣ. ಇದರಿಂದ ಸರ್ಕಾರಕ್ಕೂ ಡ್ಯಾಮೇಜ್ ಆಗಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು. ಚುನಾವಣೆ ನಂತರ ಮೈತ್ರಿ ಬಗ್ಗೆ ಎಚ್ಡಿ ದೇವೇಗೌಡರ ಮಾತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇದೇ ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆ ಮೈತ್ರಿ ವಿಚಾರವಾಗಿ ಇಂದು ಜೆಡಿಎಸ್ ಮಹತ್ವದ ಸಭೆ ನಡೆಸುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಶಾಸಕರು, ಸಚಿವರ ಸಭೆ ನಡೆಯಲಿದೆ. ಪ್ರಮುಖವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಬಗ್ಗೆ ಅಂತಿಮ ನಿರ್ಧಾರವನ್ನ ತೆಗದುಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಲೋಕಸಭೆ ಚುನಾವಣೆಯಲ್ಲಿ ದೋಸ್ತಿಗೆ ಈಗಾಗಲೇ ಓಕೆ ಅಂದಿರುವ ಜೆಡಿಎಸ್, ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಇಳಿಸಬೇಕು. ಎಷ್ಟು ಸ್ಥಾನವನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು ಅಂತ ನಿರ್ಧರಿಸಲಿದೆ. ಇದರ ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ವಹಿಸುವ ಕುರಿತು ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews