ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರವೀಣ್ ಕೊಲೆ ಖಂಡಿಸಿ ಬಿಜೆಪಿ ಪದಾಧಿಕಾರಿಗಳು ನೀಡುತ್ತಿರುವ ರಾಜೀನಾಮೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ನೀಡುವುದು ಹೇಡಿಗಳ ಲಕ್ಷಣ ಎಂದು ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷನ ಕೊಲೆ, ಮಂಗಳೂರಿನಲ್ಲಿ ಪ್ರವೀಣ್ ಕೊಲೆಯಾಗಿರಬಹುದು. ಆದರೆ ನಮ್ಮ ಸಿದ್ಧಾಂತವನ್ನು ಕೊಲ್ಲಲು ಆಗುವುದಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಡುತ್ತಿರುವುದು ಸರಿಯಲ್ಲ. ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ. ಈ ಕೂಡಲೇ ರಾಜೀನಾಮೆ ಹಿಂಪಡೆಯಿರಿ ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಅನೇಕ ಹಿರಿಯರು ಪ್ರಾಣ ತ್ಯಾಗ, ಬಲಿದಾನಗಳ ಮೂಲಕ ಕಟ್ಟಿದ್ದಾರೆ. ನಾವೆಲ್ಲಾ ಒಂದು ಸ್ಥಾನಮಾನದಲ್ಲಿ ಇದ್ದೇವೆ. ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಈಗಲೇ ರಾಜೀನಾಮೆ ಕೊಡುತ್ತೇವೆ ಎಂದರೆ ಹೇಗೆ? ನೀವು ಪಕ್ಷಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 1,100 ಎನ್ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ
ರಾಜೀನಾಮೆ ಕೊಡುವುದರಿಂದ ಹಿಂದುತ್ವ ಸಿದ್ಧಾಂತಕ್ಕೆ, ನಮ್ಮ ನಾಯಕರಿಗೆ ಅಪಮಾನ ಮಾಡಿದಂತೆ. ರಾಜೀನಾಮೆಯೇ ಉತ್ತರ ಅಲ್ಲ. ರಾಜೀನಾಮೆ ಕೊಟ್ಟಿರುವವರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಆ ಜಾಗಕ್ಕೆ ಬೇರೆಯವರು ಬರುತ್ತಾರೆ. ಬಿಜೆಪಿಗೆ ಏನು ಕಾರ್ಯಕರ್ತರು ಸಿಗುವುದಿಲ್ಲವಾ? ರಾಜೀನಾಮೆ ಸಿಟ್ಟಿನಿಂದ ಕೊಟ್ಟಿದ್ದಾರೆ. ಜೊತೆಗೆ ನಮ್ಮ ಯುವಕರಿಗೆ ಸ್ವಲ್ಪ ಪ್ರಬುದ್ಧತೆ ಕಡಿಮೆ. ಅವರಿಗೆ ಸಮಾಧಾನ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು