ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

Public TV
1 Min Read
udp namaz 4

ಉಡುಪಿ: ಈ ಬಾರಿ ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಅತೀ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯೂ ಬರ ಪೀಡಿತ ಅಂತ ಘೋಷಣೆಯಾಗಿದೆ. ಕಳೆದೊಂದು ತಿಂಗಳಿಂದ ಸ್ವರ್ಣಾ ನದಿ ಬತ್ತಿ ಹೋಗಿದ್ದು, ಉಡುಪಿ ನಗರವಾಸಿಗಳಿಗೆ ಕುಡಿಯಲು ನೀರಿಲ್ಲ. ಪರಮಾತ್ಮ ಕರುಣೆ ತೋರು ಅಂತ ಉಡುಪಿಯ ಬ್ರಹ್ಮಗಿರಿ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಲಾಯ್ತು.

udp namaz 1

ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಮಳೆಗಾಗಿ ಕಾದು ಕಾದು ಸುಸ್ತಾದ ಜನ ದೇವರ ಮೊರೆ ಹೋಗಿದ್ದಾರೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹಾಶೀಮಾ ಮಸೀದಿಯಲ್ಲಿ ಭಕ್ತರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 15 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿರುತ್ತದೆ. ಆದ್ರೆ ಗಾಳಿ ಮೋಡವನ್ನೆಲ್ಲಾ ಹೊತ್ತುಕೊಂಡು ಸಾಗುತ್ತಿದೆ.

udp namaz 5

ಈ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಹಶೀಂ ಉಮ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ದೇವರು ಮಳೆಯನ್ನು ಹಿಡಿದಿಟ್ಟುಕೊಂಡಿದ್ದಾನೆ. ಭೂಮಿ ಮೇಲಿರುವ ಜನಗಳು ಮಾಡಿರುವ ಪಾಪದಿಂದ ಈ ಸಮಸ್ಯೆಯಾಗಿದೆ. ಪಾಪ ಪರಿಹರಿಸಿ ಮಳೆ ಅನುಗ್ರಹಿಸಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಅಲ್ಲಾಹ್ ಕರುಣೆ ತೋರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

udp namaz 3

ನಮಾಜ್ ಹಾಲ್‍ನಲ್ಲಿ ಜಮಾಯಿಸಿ ಅಲ್ಲಾಹ್‍ನಲ್ಲಿ ಕಷ್ಟ ಪರಿಹರಿಸು ಅಂತ ಬೇಡಿಕೊಂಡರು. ಬರದ ಪರಿಸ್ಥಿತಿಯಲ್ಲಿ ಮಹಮ್ಮದ್ ಪೈಗಂಬರ್ ಅಂದು ಮಾಡಿದ ಪ್ರಾರ್ಥನಾ ಸಾಲುಗಳು ಖುರಾನ್‍ನಲ್ಲಿ ಉಲ್ಲೇಖವಾಗಿತ್ತು. ಅದೇ ಸಾಲುಗಳನ್ನು ಮಸೀದಿಯಲ್ಲಿ ಪಠಿಸಲಾಯ್ತು. ಉಡುಪಿಯ ಜೀವನದಿ ಸ್ವರ್ಣಾ ಹರಿವು ನಿಲ್ಲಿಸಿ ತಿಂಗಳು ಕಳೆದಿದೆ. ಹಳ್ಳಕೊಳ್ಳಗಳ ನೀರನ್ನು ಪಂಪ್ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ. ಭಗವಂತ ಕರುಣೆ ತೋರಿದ್ರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ. ಪರಿಸರದ ಬಗ್ಗೆ ಜನರು ಕಾಳಜಿಯನ್ನು ಕಳೆದುಕೊಂಡಿದ್ದಾರೆ. ಮರ ಕಡಿಯಲಾಗುತ್ತಿದ್ದು, ಕಾಡು ನಾಶವಾಗಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಸಮಸ್ಯೆ ದ್ವಿಗುಣವಾಗಲಿದೆ ಎಂದು ನಮಾಜ್ ಸಲ್ಲಿಸಿದ ಇಕ್ಬಾಲ್ ನಾಯರ್‍ಕೆರೆ ಆತಂಕ ವ್ಯಕ್ತಪಡಿಸಿದರು.

udp namaz 2

udp namaz 7

 

Share This Article
Leave a Comment

Leave a Reply

Your email address will not be published. Required fields are marked *